ಹಳೇಬೀಡು: ರೈತರು ತಾಳೆ ಬೆಳೆ ಕೃಷಿ ಕೈಗೊಳ್ಳುವುದರಿಂದ ನಿರ್ದಿಷ್ಟ ಆದಾಯ ಪಡೆಯಬಹುದು ಎಂದು ಪತಂಜಲಿ ಕಂಪನಿ ಕ್ಷೇತ್ರಾಧಿಕಾರಿ ಹನುಮೇಗೌಡ ಹೇಳಿದರು.
ರಾಜನಶಿರಿಯೂರು ಗ್ರಾಮದ ಪುಟ್ಟಮಲ್ಲೇಗೌಡರ ತೋಟದಲ್ಲಿ ಬುಧವಾರ ತೋಟಗಾರಿಕೆ ಇಲಾಖೆ ಹಾಗೂ ಪತಂಜಲಿ ಕಂಪೆನಿ ಆಶ್ರಯದಲ್ಲಿ ನಡೆದ ತಾಳೆಬೆಳೆ ಯೋಜನೆ ಅಡಿಯಲ್ಲಿ ರೈತರಿಗೆ ಅರಿವು ಕಾರ್ಯಟಕ್ರಮದಲ್ಲಿ ಅವರು ಮಾತನಾಡಿದರು.
ತಾಳೆ ಬೆಳೆ ನಾಟಿ ಮಾಡಿದ ನಾಲ್ಕು ವರ್ಷದ ನಂತರ ಫಸಲು ಬರುತ್ತದೆ. ತಾಳೆ ಮಾರುಕಟ್ಟೆಗಾಗಿ ಪರದಾಡುವ ಅಗತ್ಯವಿಲ್ಲ. ಪತಂಜಲಿ ಕಂಪೆನಿ ನೇರವಾಗಿ ರೈತರಿಂದ ತಾಳೆ ಫಸಲನ್ನು ಉತ್ತಮ ಬೆಲೆಗೆ ಖರೀದಿ ಮಾಡುತ್ತದೆ ಎಂದು ಅವರು ಹೇಳಿದರು.
ತಾಳೆ ಬೆಳೆ ಮಾಡಲು ಕೃಷಿ ಇಲಾಖೆಯಿಂದ ಸಹಾಯ ಧನ ದೊರಕುತ್ತದೆ. ತಿಂಗಳಿಗೆ ಎರಡು ಬಾರಿ ಕೊಯ್ಲು ಮಾಡಿ ಮಾರಾಟ ಮಾಡಲು ಅವಕಾಶವಿದೆ. ರೈತರು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ತಾಳೆ ಕೃಷಿಯ ಮಾಹಿತಿ ಪಡೆಯಬೇಕು ಎಂದು ಹನುಮೇಗೌಡ ಹೇಳಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ನಾಗರಾಜು ಮಾತನಾಡಿ, ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 1 ಲೀಟರ್ ನೀರಿಗೆ 1 ಮಿಲಿ ಪ್ರೋಫಿನೋಕೋನಜೋಲ್ ಸಿಂಪಡಣೆ ಮಾಡಬೇಕು.
ತೆಂಗಿನ ಬೆಳೆಯ ಕಾಂಡ ಸೋರುವ ರೋಗ ನಿಯಂತ್ರಣಕ್ಕೆ ಹೆಕ್ಸಾಕೊನೋಝೋಲ್ ಎಂಬ 5 ಮಿಲಿ ಔಷಧಿಯನ್ನು 100 ಮಿಲಿ ನೀರಿಗೆ ಮಿಶ್ರಣ ಮಾಡಿ, ತೆಂಗಿನ ಗಿಡದ ಬೇರಿಗೆ ಬಳಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಅ
ತೋಟಗಾರಿಕಾ ಅಧಿಕಾರಿ ಮಧು ಕುಮಾರ್.ಕೆ.ಎಸ್ ಮಾತನಾಡಿ,
ತಾಳೆಯಿಂದ ಅಡುಗೆ ಎಣ್ಣೆ ಹಾಗೂ ಸೌಂದರ್ಯ ವರ್ಧಕಗಳು ತಯಾರಿಕೆ ಆಗುತ್ತದೆ. ಹೀಗಾಗಿ ತಾಳೆ ಫಸಲಿಗೆ ನಿರ್ಧಿಷ್ಟ ಮಾರುಕಟ್ಟೆ ಇರುತ್ತದೆ. ತಾಳೆ ಬೆಳೆಯೊಂದಿಗೆ ಅಂತರ ಬೆಳೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆಯಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬ್ಯಾಡಗೆರೆ ಪ್ರಗತಿಪರ ರೈತ ಅನಂತ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕೃಷಿ ಅಧಿಕಾರಿ ಹೇಮಂತ್ ಕುಮಾರ್, ತೋಟಗಾರಿಕೆ ಅಧಿಕಾರಿಗಳಾದ ರಂಜಿತಾ, ಕಿಶೋರ್ ಮಾತನಾಡಿದರು.
ರೈತ ಪುಟ್ಟಮಲ್ಲೇಗೌಡ, ಶಿಕ್ಷಕ ಮೋಹನರಾಜು ಪಾಲ್ಗೊಂಡಿದ್ದರು.
Patanjali Company Field Officer Hanumegowda said that farmers can earn a certain income by taking up palm cultivation.










