ಚನ್ನರಾಯಪಟ್ಟಣ: ಸಂಘದ ಲಾಭಾಂಶವನ್ನು ಹಾಲು ಉತ್ಪಾದಕ ಸದಸ್ಯರಿಗೆ ನೀಡುವ ಮೂಲಕ ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಹಿರೀಸಾವೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ ಮತ್ತು ಪಶು ಆಹಾರ ದಾಸ್ತಾನು ಕೊಠಡಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಂಘದ ಬೆಳವಣಿಗೆಯಲ್ಲಿ ಸದಸ್ಯರು ಹೆಚ್ಚು ಶ್ರಮ ಇರುತ್ತದೆ. ಗುಣಮಟ್ಟದ ಹಾಲನ್ನು ಸಂಘದ ಸದಸ್ಯರು ಸರಬರಾಜು ಮಾಡಿರುವುದರಿಂದ 2024–25ನೇ ಸಾಲಿನಲ್ಲಿ ಈ ಸಂಘವು ರೂ. 2,14,337 ನಿವ್ವಳ ಲಾಭಗಳಿಸಿದೆ.
ಆ ಲಾಭ ಅವರಿಗೆ ಸೇರಬೇಕು. ಹೈನುಗಾರಿಕೆಗೆ ನೇರವಾದ ಮಾರುಕಟ್ಟೆ ಸಿಗುತ್ತಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದು ತಿಳಿಸಿದರು. ಹಾಸನ ಸಹಕಾರಿ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಂ. ದಯಾನಂದ್ ಮಾತನಾಡಿ, ರೂ. 90,970 ಗಳನ್ನು ಬೋನಸ್ ರೂಪದಲ್ಲಿ ವರ್ಷ ಪೂರ್ತಿ ಹಾಲು ಸರಬರಾಜು ಮಾಡಿದ ಪ್ರಮಾಣದಂತೆ ಸದಸ್ಯರಿಗೆ ಹಂಚಲಾಗುವುದು ಎಂದರು.
ಸಂಘದ ಅಧ್ಯಕ್ಷೆ ಪವಿತ್ರ ಮಂಜನಾಥ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ರವಿಕುಮಾರ್, ಅನಂತರಾಜು, ಆಣತಿ ಯೋಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ಗ್ರಾಮ ಪಂಚಾಯತ ಸದಸ್ಯ ಸಂತೋಷ್ ಪಿಎಂಶ್ರೀ ಎಚ್ ಪಿಜಿ ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವರಾಜು, ಸಂಘದ ಕಾರ್ಯದರ್ಶಿ ಭಾರತಿ ಕುಮಾರ್ ಮತ್ತು ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಇನ್ನಿತರರು ಭಾಗವಹಿಸಿದ್ದರು.








