ಬೆಂಗಳೂರು: ಮಾಧ್ಯಮಗಳು ಸ್ವಯಂ ನಿಯಂತ್ರಣ ವಿಧಿಸಿಕೊಂಡು ಸತ್ಯ ಮತ್ತು ನಿಖರ ಸುದ್ದಿಗಳನ್ನು ಜನರಿಗೆ ತಲುಪಿಸಲು ಸಂಘಟಿತ ನಡೆಸುವ ಮೂಲಕ ವಿಶ್ವಾಸರ್ಹತೆ ಕಾಪಾಡಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧೀಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯ ಮಟ್ಟದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸುದ್ದಿಯನ್ನು ತಲುಪಿಸುವ ನಿಟ್ಟಿನಲ್ಲಿ ಧಾವಂತ ಬೇಡ. ಸರಿಯಾದ ಸುದ್ದಿಯನ್ನು ಜನರಿಗೆ ತಲುಪಿಸುವುದು ಆದ್ಯತೆಯಾಗಬೇಕು ಎಂದರು.
ಇದು ಕೃತಕ ಬುದ್ಧಿಮತ್ತೆ (ಎ.ಐ.)ಕಾಲವಾಗಿದ್ದು, ಮಾಧ್ಯಮಗಳು ಸುದ್ದಿ ಪ್ರಸಾರಕ್ಕೆ ಮುನ್ನ ಸುದ್ದಿ ಚಿತ್ರಗಳ ನೈಜತೆಯನ್ನು ಖಚಿತ ಪಡಿಸಿಕೊಳ್ಳುವುದು ಅಗತ್ಯ. ಸುಳ್ಳು ಸುದ್ದಿಗಳು, ನಕಲಿ ಚಿತ್ರ, ದೃಶ್ಯಗಳ ಬಗ್ಗೆ ಎಚ್ಚರಿಕೆ ಅಗತ್ಯ. ಒಮ್ಮೆ ಚಾರಿತ್ರ್ಯವಧೆ ಆದರೆ ಮತ್ತೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಧ್ಯಮಗಳಿಗೆ ವಿಶ್ವಾಸಾರ್ಹತೆ ಮುಖ್ಯ. ಹೀಗಾಗಿ ಪೂರ್ವಾಗ್ರಹ ಪೀಡಿತವಾಗಿ ಮತ್ತು ರೋಚಕ ಸುದ್ದಿಗಳನ್ನು ಬಿತ್ತಸಿರುವ ಧಾವಂತದಲ್ಲಿ ಸುಳ್ಳೇ ಸತ್ಯ ಎಂಬಂತೆ ಬಿಂಬಿಸಬಾರದು, ಇದು ಜನರ ನಂಬಿಕೆಯನ್ನು ದೂರ ಮಾಡುತ್ತದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿದ್ದವು. ಸ್ವಾತಂತ್ರ್ಯೋತ್ತರದಲ್ಲೂ ಪತ್ರಿಕೆಗಳು, ಮಾಧ್ಯಮಗಳು ದೊಡ್ಡ ಪಾತ್ರ ನಿರ್ವಹಿಸುತ್ತಿವೆ. ಮಾಧ್ಯಮಗಳಿಗೆ, ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಶಕ್ತಿ ಇದ್ದು, ಅತ್ಯಂತ ಪ್ರಭಾವಶಾಲಿ ಸಾಧನವಾಗಿದೆ. ಇದರ ಸದ್ಬಳಕೆ ಆಗಬೇಕು ಎಂದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಸ್ಥಿತಿಯನ್ನು ಇಡೀ ಜಗತ್ತು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಕೃತಿ, ಪರಿಸರ, ವೃಕ್ಷ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಡಿವಿಜಿ ಸ್ಥಾಪಿಸಿದ ಪತ್ರಕರ್ತರ ಸಂಘವು ಬೃಹತ್ತಾಗಿ ಬೆಳೆದಿದ್ದು, ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಸುಸೂತ್ರವಾಗಿ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಿರುವುದು ಅಭಿನಂದನಾರ್ಹ ಎಂದರು.
ಎಂ.ಎಸ್.ಗುರುಪಾದಸ್ವಾಮಿ, ಖಾದ್ರಿ ಶಾಮಣ್ಣ, ಜಯಶೀಲರಾವ್, ಮೊದಲಾದವರು ಅಧ್ಯಕ್ಷರಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಶಿವಾನಂದ ತಗಡೂರು ಅವರ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ಪ್ರಶಂಸಿಸಿದರು.
1955ರಲ್ಲೇ ಪತ್ರಕರ್ತರಿಗೆ ಸೂಕ್ತ ವೇತನ, ಭತ್ಯೆ ಸಿಗಬೇಕು ಎಂಬುದನ್ನು ಮನಗಂಡ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕಾರ್ಯನಿರತ ಪತ್ರಕರ್ತರು ಮತ್ತು ಇತರ ಸುದ್ದಿ ಪತ್ರಿಕೆಗಳ ನೌಕರರ ಕಾಯಿದೆ 1955 ನ್ನು ಜಾರಿಗೆ ತಂದರು. ಮಾಧ್ಯಮಗಳು ಖಾಸಗಿ ವಲಯವೇ ಆಗಿದ್ದರೂ ವೇತನ ಆಯೋಗ ರಚಿಸಿ ಪತ್ರಕರ್ತರ ನೆರವಿಗೆ ನಿಂತರು ಎಂದರು.
ಅಭಿಮಾನದ ಸಂಗತಿ:
ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಅವರು ಮಾತನಾಡಿ, ನಾನು ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯೆಯಾಗಿ, ಪದಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಅಂದು ಇಂದಿರಾಗಾಂದಿ ಅವರು ನಮ್ಮ ಸಂಘಕ್ಕೆ ಬಂದಿದ್ದು, ನಾನೇ ಅವರನ್ನು ಹಾರ ಹಾಕಿ ಸ್ವಾಗತಿಸಿದ್ದ ಅಭಿಮಾನವಿದೆ. ಇಂದು ಈ ಸಂಘಟನೆ ಬೃಹತ್ತಾಗಿ ಬೆಳೆದಿರುವುದು ಅಭಿಮಾನದ ಸಂಗತಿ ಎಂದರು.
ಸಂಘದ ಹೋರಾಟ ನಿರಂತರ:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸವಾಲುಗಳ ವಿರುದ್ದವೇ ಈಜುತ್ತಾ ಬಂದಿರುವ ಕೆಯುಡಬ್ಲೂೃಜೆ ಹೋರಾಟದ ಪರಿಣಾಮವಾಗಿ ಹಲವು ಸೌಲಭ್ಯಗಳು ಪತ್ರಕರ್ತರಿಗೆ ಸಿಗಲು ಸಾಧ್ಯವಾಗಿದೆ. ಮುಂದೆಯೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ ಎಂದು ತಿಳಿಸಿ, ಚುನಾವಣೆಯಲ್ಲಿ ಗೆದ್ದಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಚುನಾವಣೆ ಸಂಘದ ಘನತೆ ಹೆಚ್ಚಿಸಿದೆ:
ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಈ ಬಾರಿ ಚುನಾವಣೆ ಜವಾಬ್ದಾರಿಯನ್ನು ನನಗೆ ವಹಿಸಿದ ಕ್ಷಣದಿಂದ ಹಿಡಿದು, ಚುನಾವಣೆ ಮುಗಿಸುವ ತನಕ ಹಲವು ಸವಾಲುಗಳ ವಿರುದ್ದವೇ ಈಜಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆದಿದ್ದು, ಸಂಘದ ಘಟತೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಕೆಯುಡಬ್ಲೂಜೆ ಸನ್ಮಾನ:
ಚುನಾವಣೆಯನ್ನು ವ್ಯವಸ್ಥಿತ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಎನ್.ರವಿಕುಮಾರ್ ಟೆಲೆಕ್ಸ್ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು ಅವರನ್ನು ಗೌರವಿಸಲಾಯಿತು.
ಐಎ್ಡಬ್ಲ್ಯುಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕೆಯುಡಬ್ಲೂೃಜೆ ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ, ಮತ್ತಿಕೆರೆ ಜಯರಾಂ, ಅಜ್ಜಮಾಡ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿಗಳಾದ ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು, ಪುಂಡಲೀಕ ಭಾಳೋಜಿ, ಖಜಾಂಚಿ ವಾಸುದೇವ ಹೊಳ್ಳ ವೇದಿಕೆಯಲ್ಲಿದ್ದರು. ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಸ್ವಾಗತಿಸಿದರು. ಸುಖನ್ಯ ಕಾರ್ಯಕ್ರಮ ನಿರೂಪಿಸಿದರು










