ಮಾಡಾಳು (kannadapost.com):ರಾಜ್ಯಾದ್ಯಂತ ‘ಶಕ್ತಿ ದೇವತೆ’ ಎಂದೇ ಭಕ್ತರ ಪಾಲಿಗೆ ಆರಾಧ್ಯ ದೈವವಾಗಿರುವ ಪುಣ್ಯಕ್ಷೇತ್ರ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯು ಆಗಸ್ಟ್ 30ರ ಭಾನುವಾರದಂದು ಮೃತ್ತಿಕೆ (ಮಣ್ಣು) ರೂಪದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುರ ಪ್ರವೇಶ ಮಾಡಲಿದ್ದಾಳೆ.
ಕಳೆದ 167 ವರ್ಷಗಳಿಂದ ಅತ್ಯಂತ ಭಕ್ತಿ-ಭಾವ ಮತ್ತು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ಶ್ರೀ ಸ್ವರ್ಣ ಗೌರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿಗಳಾದ ಶ್ರೀ ಚೇತನ್ ಮರಿದೇವರ ದಿವ್ಯ ಸಾನಿಧ್ಯದಲ್ಲಿ ಈ ಭವ್ಯ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ.
ಶ್ರೀಗಳ ದಿವ್ಯ ಸಂಕಲ್ಪ ಹಾಗೂ ಮಾರ್ಗದರ್ಶನ
ಕೋಡಿಮಠದ ಮಹಾತಪಸ್ವಿ, ಯೋಗ ಸಮಾಧಿಯಲ್ಲಿರುವ ಶಿವಲಿಂಗಜ್ಜ ಹಾಗೂ ನೀಲಮ್ಮ ದೇವಿಯವರ ಕೃಪಾಶೀರ್ವಾದ ಮತ್ತು ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ ಈ ಬಾರಿಯ ಉತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ನಾಡಿನ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರು ಈ ಐತಿಹಾಸಿಕ ಮತ್ತು ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಮೃತ್ತಿಕಾ ಪುರ ಪ್ರವೇಶದ ಪೂಜಾ ವಿವರ:
ಆಗಸ್ಟ್ 30ರ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ದೇವಿಯ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತದನಂತರ, ಗ್ರಾಮದ ಹೊರಭಾಗದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಾಲಯದ ಮುಂಭಾಗದ ತೋಟಕ್ಕೆ ತೆರಳಿ, ದೇವಿಯ ನೂತನ ಮೂರ್ತಿ ತಯಾರಿಸಲು ಪವಿತ್ರ ಮೃತ್ತಿಕೆಯನ್ನು (ಮಣ್ಣು) ಸಂಗ್ರಹಿಸಲಾಗುವುದು.
ಅಲ್ಲಿ ಕೋಡಿಮಠದ ಶ್ರೀಗಳ ಪಾದಪೂಜೆ ನೆರವೇರಿದ ಬಳಿಕ, ಅತ್ಯಂತ ಭಕ್ತಿ-ಶ್ರದ್ಧೆಯಿಂದ ಎರಡು ಕುಕ್ಕೆಗಳಲ್ಲಿ ಪವಿತ್ರ ಮೃತ್ತಿಕೆಯನ್ನು ತಲೆ ಮೇಲೆ ಹೊತ್ತುಕೊಂಡು, ಸಕಲ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ವಾಪಸ್ ದೇವಿಯ ಮೂಲ ಸನ್ನಿಧಿಗೆ ತರಲಾಗುತ್ತದೆ.
167 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಜಾತ್ರಾ ಮಹೋತ್ಸವವು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಈ ವರ್ಷವೂ ಮತ್ತಷ್ಟು ಕಳೆಗಟ್ಟಲಿದ್ದು, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.












