ಹಾಸನ(kannadapost.com): ನಗರದ ಸಂತೇಪೇಟೆ ಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಭಾರಿ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಮುಂದಾದ ಜೈಲು ಸಿಬ್ಬಂದಿ ಮೇಲೆಯೇ ಗುಂಪೊಂದು ಹಲ್ಲೆ ನಡೆಸಿರುವ ಗಂಭೀರ ಘಟನೆ ವರದಿಯಾಗಿದೆ. ನಟೋರಿಯಸ್ ರೌಡಿಶೀಟರ್ ಕೊಲೆ ಪ್ರಕರಣದ ಆರೋಪಿಗಳು ಈ ಪುಂಡಾಟಿಕೆ ಮೆರೆದಿದ್ದಾರೆ.
ಘಟನೆಯ ಹಿನ್ನೆಲೆ: ಫೋನ್ ಕರೆಗಾಗಿ ಶುರುವಾದ ರಾದ್ಧಾಂತ
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ಎಂಬುವವರು ದೂರವಾಣಿ ಕರೆ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ‘ಮೊದಲು ಯಾರು ಫೋನ್ ಮಾಡಬೇಕು’ ಎಂಬ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ನೋಡನೋಡುತ್ತಿದ್ದಂತೆಯೇ ಜಗಳ ವಿಕೋಪಕ್ಕೆ ತಿರುಗಿ, ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಪಿ.ಸಿ.ಎಸ್ ಕೊಠಡಿಯಲ್ಲಿ ಹೈಡ್ರಾಮಾ; ಸಿಬ್ಬಂದಿ ಮೇಲೆ ಹಲ್ಲೆ
ಕೈದಿಗಳಿಬ್ಬರ ಜಗಳವನ್ನು ಬಿಡಿಸಲು ಜೈಲು ಮುಖ್ಯ ವೀಕ್ಷಕರಾದ ಪರಶುರಾಮ ಹಾಗೂ ವೀರೇಶ್ ಸಂಗಮದ್ ಅವರು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಏಕಾಏಕಿ ಪಿ.ಸಿ.ಎಸ್. (PCS) ಕೊಠಡಿಯೊಳಗೆ ನುಗ್ಗಿದ ಶಶಿಧರ, ರಾಕೇಶ, ಯಲ್ಲಾಲಿಂಗ, ಆಕಾಶ, ಉಮೇಶ, ಸಾಯಿನಾಥ, ನಿರೂಪ್, ಭರತ, ಹಾಗೂ ಚೇತನ್ ಎಂಬ ೯ ಮಂದಿ ವಿಚಾರಣಾಧೀನ ಕೈದಿಗಳ ಗುಂಪು, ಕೈದಿ ರಂಗಸ್ವಾಮಿ ಮೇಲೆ ತೀವ್ರ ಹಲ್ಲೆ ನಡೆಸಿದೆ.
ಇದನ್ನು ತಡೆಯಲು ಜೈಲು ಸಿಬ್ಬಂದಿಗಳಾದ ವೀರೇಶ್ ಸಂಗಮದ್, ಶಿವಕುಮಾರ ಮತ್ತು ಪರಶುರಾಮ.ಹೆಚ್ ಅವರು ಯತ್ನಿಸಿದ್ದಾರೆ. ಆದರೆ, ರೊಚ್ಚಿಗೆದ್ದ ಈ ಗುಂಪು, ಕರ್ತವ್ಯದಲ್ಲಿದ್ದ ಜೈಲು ವೀಕ್ಷಕ ವೀರೇಶ್ ಸಂಗಮದ್ ಅವರನ್ನು ತಳ್ಳಿ, ಕೆಳಗೆ ಬೀಳಿಸಿ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ವೀರೇಶ್ ಸಂಗಮದ್ ಅವರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರೌಡಿಶೀಟರ್ ಕೊಲೆ ಆರೋಪಿಗಳ ಅಟ್ಟಹಾಸ
ಗಮನಾರ್ಹ ಅಂಶವೆಂದರೆ, ಹಲ್ಲೆ ನಡೆಸಿದ ಮೋಹನಕುಮಾರ ಹಾಗೂ ಶಶಿಧರ, ರಾಕೇಶ, ಯಲ್ಲಾಲಿಂಗ, ಆಕಾಶ, ಉಮೇಶ, ಸಾಯಿನಾಥ, ನಿರೂಪ್, ಭರತ ಮತ್ತು ಚೇತನ್ – ಇವರೆಲ್ಲರೂ ಹಾಸನದ ನಟೋರಿಯಸ್ ರೌಡಿಶೀಟರ್ ‘ಮಂಜೇಶ್’ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಪ್ರಸ್ತುತ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ.
ಪ್ರಕರಣ ದಾಖಲು
ಜೈಲಿನೊಳಗೆ ನಡೆದ ಈ ಗಲಾಟೆ, ಗುಂಪು ಘರ್ಷಣೆ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.












