ಹೊಳೆನರಸೀಪುರ: ಕೇದಾರನಾಥ ಯಾತ್ರೆಗೆ ತೆರಳಿದ್ದ ವೇಳೆ ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಮಲ್ಲೇನಹಳ್ಳಿ ಗ್ರಾಮದ ಎಂ.ಎನ್.ನಂದಿನಿ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದ್ದು ಸಂಸದ ಶ್ರೇಯಸ್ ಪಟೇಲ್ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ನಂದಿನಿ ಕೇದಾರನಾಥ ಯಾತ್ರೆಯ ಸಂದರ್ಭದಲ್ಲಿ ಮಾರ್ಗಮಧ್ಯೆ ಉಸಿರಾಟದ ತೊಂದರೆಗೆ ಒಳಗಾಗಿದ್ದರು. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಸಂಸತ್ ಅಧಿಕಾರಿಗಳು ಹಾಗೂ ರುದ್ರಪ್ರಯಾಗ ಜಿಲ್ಲಾಧಿಕಾರಿ ವಿಶಾಲ್ ಮಿಶ್ರಾ ಅವರನ್ನು ಸಂಪರ್ಕಿಸಿದ ಶ್ರೇಯಸ್ ಪಟೇಲ್ ತ್ವರಿತ ಕ್ರಮಕ್ಕೆ ಸೂಚಿಸಿದ್ದರು. ಸಂಸದರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.
ಪ್ರಸ್ತುತ ಅವರು ಆರೋಗ್ಯವಾಗಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳು ಹಾಗೂ ನೆರವು ನೀಡಿದ ಸಿಬ್ಬಂದಿಗೆ ಸಂಸದ ಶ್ರೇಯಸ್ ಪಟೇಲ್ ಧನ್ಯವಾದ ತಿಳಿಸಿದ್ದಾರೆ.
*ಅರ್ಧ ಗಂಟೆಯಲ್ಲಿ ತ್ವರಿತ ಕ್ರಮ*
ಘಟನೆ ಕುರಿತು ಎಂ.ಎನ್. ನಂದಿನಿ ಮಾತನಾಡಿ, ಕೇದಾರನಾಥ ಯಾತ್ರೆಗೆಂದು ಹೋದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಭಾವಿಸಿರಲಿಲ್ಲ. ಭಕ್ತರ ಸಂಖ್ಯೆ ವಿಪರೀತವಾಗಿತ್ತು. ಹೇಗೋ ಹರಸಾಹಸಪಟ್ಟು ದೇವಾಲಯ ತಲುಪಿದ್ದೆವು. ಆದರೆ ವಾಪಾಸ್ ಬರುವಾಗ ಉಸಿರಾಡಲು ಗಾಳಿ ಇಲ್ಲದೆ ತೀವ್ರ ತೊಂದರೆ ಆಯಿತು. ಅಲ್ಲಿನ ಅಧಿಕಾರಿಗಳು ಆಕ್ಸಿಜನ್ ಗೆ ವ್ಯವಸ್ಥೆ ಮಾಡಿದರೂ ಪ್ರಯೋಜನವಾಗಲಿಲ್ಲ. ಆಗ ನಾವು ಸಂಸದ ಶ್ರೇಯಸ್ ಪಟೇಲ್ ಅವರಿಗೆ ಕರೆ ಮಾಡಿದಾಗ ತಕ್ಷಣ ಅವರು ರುದ್ರಪ್ರಯಾಗ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಸಿದರು. ಕರೆ ಮಾಡಿದ ಅರ್ಧಗಂಟೆಯೊಳಗೆ ನಾನು ಸುರಕ್ಷಿತ ಜಾಗ ತಲುಪಿದೆ. ಈ ಸಹಾಯಕ್ಕಾಗಿ ಶ್ರೇಯಸ್ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.










