0.9 C
Munich
Home ಮನರಂಜನೆ ರಿಯಲ್ ‘ಮುದ್ದು’ಗಳನ್ನು ಪರಿಚಯಿಸಿದ ಕುಮಾರ್ | ‘ಲವ್ ಯು ಮುದ್ದು’ ಸಿನಿಮಾ ಇವರದ್ದೇ ಕಥೆ

ರಿಯಲ್ ‘ಮುದ್ದು’ಗಳನ್ನು ಪರಿಚಯಿಸಿದ ಕುಮಾರ್ | ‘ಲವ್ ಯು ಮುದ್ದು’ ಸಿನಿಮಾ ಇವರದ್ದೇ ಕಥೆ

ರಿಯಲ್ 'ಮುದ್ದು'ಗಳನ್ನು ಪರಿಚಯಿಸಿದ ಕುಮಾರ್ | 'ಲವ್ ಯು ಮುದ್ದು' ಸಿನಿಮಾ ಇವರದ್ದೇ ಕಥೆ

‘ಲವ್ ಯು ಮುದ್ದು’ ಸಿನಿಮಾ ಟೈಟಲ್ ಹಾಗೂ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಇಮ್ಮಡಿಗೊಳಿಸಿದೆ. ಮೊದಲ ಬಾರಿಗೆ ಲವ್ ಕಥೆಯನ್ನು ಕುಮಾರ್ ತೆರೆಗೆ ತರ್ತಿದ್ದಾರೆ. ಅದರಲ್ಲಿಯೂ ನೈಜ ಘಟನೆಯನ್ನು ಇಟ್ಕೊಂಡು ಅದಕ್ಕೆ ದೃಶ್ಯ ರೂಪಕ್ಕೆ ಇಳಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವ ದಂಪತಿಗಳಾದ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಭಾಯ್ ಶಿಂಧೆ ಕಥೆ ಈಗ ಲವ್ ಯು ಮುದ್ದು ಸಿನಿಮಾ ರೂಪ ತಾಳಿದೆ.

ಮನ ಮುಟ್ಟುವ ಕಥೆ | ಪ್ರೀತಿಯೇ ಸರ್ವಸ್ವ, ಪ್ರೀತಿಯೇ ಸಕಲ ಅನ್ನೋದನ್ನು ಸಾಬೀತು ಮಾಡಿದ ಜೋಡಿ ಆಕಾಶ್ ಹಾಗೂ ಅಂಜಲಿ. ಅವರ ಜೀವನದಲ್ಲಾದ ಏಳುಬೀಳಿನ ಕಥೆಯನ್ನು ಕುಮಾರ್ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ‌. ಆಕಾಶ್ ಪ್ರೀತಿಸಿ ಮದುವೆಯಾದ ಜೋಡಿ. ನವದಂಪತಿಗಳು ದೇವರ ದರ್ಶನ ಪಡೆಯಲು ಹೋದಾಗ ಊಹಿಸಲಾಗದ ಘಟನೆ ನಡೆಯಿತು. ಅದು ಏನು? ಅವರಿಬ್ಬ ಬಾಳಲ್ಲಿ ನಡೆದ ಘೋರ ದುರಂತವೇನು ಅನ್ನೋದನ್ನು ಲವ್ ಯು ಮುದ್ದು ಸಿನಿಮಾದಲ್ಲಿಯೇ ನೋಡಬೇಕು.

ಎಮೋಷನಲ್ ಜರ್ನಿ | ‘ಲವ್ ಯು ಮುದ್ದು’ ಭಾವುಕ ಸಿನಿಮಾ. ಚಿತ್ರ ನೋಡಿ ಹೊರಬಂದವರ ಕಣ್ಣಂಚಲ್ಲಿ ನೀರು ಬರುವುದು ಗ್ಯಾರಂಟಿ ಅನ್ನೋದು ಚಿತ್ರತಂಡ ಭರವಸೆ. ರಿಯಲ್ ಜೋಡಿ ಜೀವನದ ಬಂಧವನ್ನು ಸ್ಪರ್ಶಿಸುವ ಸಿನಿಮೀಯ ಅನುಭವವನ್ನು‌ ನೀವು ಥಿಯೇಟರ್ ನಲ್ಲಿ ಎಂಜಾಯ್ ಮಾಡಬಹುದು ಅನ್ನೋದು ನಿರ್ದೇಶಕ ಕುಮಾರ್ ಅವರ ಮಾತು. ಆಕಾಶ್ ಅಂಜಲಿ ದಂಪತಿಯಾಗಿ ಸಿದ್ದು ಮೂಲಿಮನಿ ಹಾಗೂ ಯುವ ನಟಿ ರೇಷ್ಮಾ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್‌ ನಟರಂಗ, ತಬಲ ನಾಣಿ, ಗಿರೀಶ್‌ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ತಾರಾಬಳಗದಲ್ಲಿದ್ದಾರೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಾರಥಿ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವನ್ನು ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಕಿಶನ್ ಟಿ.ಎನ್. ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ.ಎಸ್. ತಂಡದ ಭಾಗವಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ.ಎಸ್.ದೀಪು ಸಂಕಲನ ನಿರ್ವಹಿಸಿದ್ದಾರೆ. ನವೆಂಬರ್ 7ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಜಗದೀಶ್‌ ಫಿಲ್ಮ್ಸ್ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

error: Content is protected !!