ಚನ್ನರಾಯಪಟ್ಟಣ: ಸ್ಥಳೀಯ ಇತಿಹಾಸವನ್ನು ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇತಿಹಾಸದ ಅರಿವು, ಶಿಲಾ ಶಾಸನಗಳು ಹಾಗೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಾಂಶುಪಾಲ ಡಾ. ಎಸ್.ದಿನೇಶ್ ಹೇಳಿದರು.
ತಾಲೂಕಿನ ಶ್ರವಣಬೆಳಗೊಳದ ಎಸ್.ಎನ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಚಂದ್ರಗಿರಿ ಚಿಕ್ಕ ಬೆಟ್ಟ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾವಿರಾರು ವರ್ಷಗಳ ಪ್ರಾಚೀನತೆ ಹೊಂದಿರುವ ಇತಿಹಾಸವನ್ನು ತಿಳಿಸುವುದು ಬಹಳ ಮುಖ್ಯವಾಗಿದ್ದು, ಶ್ರವಣಬೆಳಗೊಳದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕವಾದ ಮೌಲಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಎಂದರು.
ಚಂದ್ರಗಿರಿ ಚಿಕ್ಕಬೆಟ್ಟವು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮಹತ್ವ ಹೊಂದಿದ ಸ್ಥಳ. ಕ್ರಿಸ್ತ ಪೂರ್ವದಲ್ಲಿ ಆಚಾರ್ಯ ಭದ್ರಬಾಹು ಮುನಿಗಳು ಸಹಸ್ರಾರು ತ್ಯಾಗಿಗಳೊಂದಿಗೆ ಶ್ರವಣಬೆಳಗೊಳಕ್ಕೆ ಬಂದ ಉಲ್ಲೇಖವಿದೆ.
ಶ್ರವಣಬೆಳಗೊಳದಲ್ಲಿ ಒಟ್ಟು 572 ಶಿಲಾ ಶಾಸನಗಳು ಇದ್ದು, ಅವುಗಳಲ್ಲಿ 271 ಶಿಲಾ ಶಾಸನಗಳು ಚಂದ್ರಗಿರಿ ಬೆಟ್ಟದಲ್ಲಿ ಇವೆ. ಪ್ರಪಂಚದಲ್ಲಿ ಅತಿ ಹೆಚ್ಚು ಶಿಲಾಶಾಸನಗಳು ಒಂದೇ ಕಡೆ ದೊರೆತಿರುವುದು ಶ್ರವಣಬೆಳಗೊಳದಲ್ಲಿ ಎಂಬುದು ಹೆಮ್ಮೆಯ ಸಂಗತಿ ಎಂದರು.
ಕನ್ನಡ ಲಿಪಿಯ ಉಗಮ, ವಿಕಾಸವನ್ನು ಅರಿಯಲು ಇಲ್ಲಿನ ಶಾಸನಗಳ ಅಧ್ಯಯನ ಬಹಳ ಮಹತ್ವ ಪಡೆದಿದೆ. ಕ್ರಿ.ಶ. 6ನೇ ಶತಮಾನದಿಂದ 19ನೇ ಶತಮಾನದ ಅವಧಿಯಲ್ಲಿ ರಚಿಸಲಾದ ಶಿಲಾ ಶಾಸನಗಳು ಸೇರಿದಂತೆ 92 ಸ್ಮಾರಕಗಳಿದ್ದು, 14 ಬಸದಿ, 7 ನಿಷಧಿ ಮಂಟಪ ಹಾಗೂ 2 ಮಾನಸ್ತಂಬಗಳು ಇಲ್ಲಿ ಲಭ್ಯವಿದೆ. ರನ್ನ ಕವಿ, ಚಾವುಂಡರಾಯ ಹಾಗೂ ಕೃಷ್ಣರಾಜೇಂದ್ರ ಒಡೆಯರ್ ಅವರ ಹಸ್ತಾಕ್ಷರವನ್ನು ಚಂದ್ರಗಿರಿ ಚಿಕ್ಕ ಬೆಟ್ಟದಲ್ಲಿ ಕಾಣಬಹುದು. ಇಲ್ಲಿ 61 ಜನ ತ್ಯಾಗಿಗಳು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಮರಣ ಹೊಂದಿರುವ ದಾಖಲೆಗಳಿವೆ.
ಬಸದಿಗಳ ವಾಸ್ತುಶಿಲ್ಪ, ತೀರ್ಥಂಕರರ ಮೂರ್ತಿಗಳ ಶಿಲ್ಪಕಲೆ ಗಮನ ಸೆಳೆಯುತ್ತವೆ. ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಹಾಗೂ ಮೈಸೂರಿನ ಅರಸರ ಕಾಲದ ಬಸದಿಗಳು ಇಲ್ಲಿದ್ದು, ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕವಾದ ಮೌಲ್ವಿಕ ವಿಚಾರಗಳು ಚಂದ್ರಗಿರಿ ಚಿಕ್ಕಬೆಟ್ಟದಲ್ಲಿ ಅಡಗಿವೆ ಎಂದು ತಿಳಿಸಿದರು.
2012 ರಲ್ಲಿ ಶ್ರವಣಬೆಳಗೊಳ ಜೈನಮಠದ ಪೀಠಾಧ್ಯಕ್ಷರಾಗಿದ್ದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಚಂದ್ರಗಿರಿ ಮಹೋತ್ಸವ ನಡೆದಾಗಿನಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಸ್ತುತ ಕ್ಷೇತ್ರದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮುಂದುವರಿಸುತ್ತಿದ್ದೇವೆ ಎಂದರು.
ಉಪನ್ಯಾಸಕರಾದ ವೀಣಾ, ದೀಪಾ, ನವೀನ್ಕುಮಾರ್, ಶಂಕರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










