ಮಾಡಾಳು: ಹಾರನಹಳ್ಳಿ ಕೋಡಿಮಠದಲ್ಲಿ ಮಾ.4ರಿಂದ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ

Here, every month's Hannime Kattalle, Karthika month's Lakshadweep festival and Palguna month's festival take place. The ongoing Shri Mahadeshwar Jatra Mahotsav has special significance. Along with religious activities, the work of creating religious awareness in the society through mythological discourses. The Mathva is continuously being carried out.

ಮಾಡಾಳು: ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಸುಕ್ಷೇತ್ರದಲ್ಲಿರುವ ಕೋಡಿಮಠ ಮಹಾಸಂಸ್ಥಾನದಲ್ಲಿ ಮಾರ್ಚ್ 4ರಿಂದ 6ರವರೆಗೆ ಮೂರು ದಿನಗಳ ಕಾಲ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಪೀಠಾಧ್ಯಕ್ಷರಾದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜರುಗಲಿರುವ ಈ ಮಹೋತ್ಸವಕ್ಕೆ ನಾಡಿನಾದ್ಯಂತ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಇಲ್ಲಿ ಪ್ರತಿಮಾಸ ನಡೆಯುವ ಹುಣ್ಣಿಮೆ ಕಟ್ಟಳೆ, ಕಾರ್ತಿಕ ಮಾಸದ ಲಕ್ಷದೀಪೋತ್ಸವ ಹಾಗೂ ಪಾಲ್ಗುಣ ಮಾಸದಲ್ಲಿ ನಡೆಯುವ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ವಿಶೇಷ ಮಹತ್ವ ಹೊಂದಿವೆ. ಧಾರ್ಮಿಕ ಚಟುವಟಿಕೆಗಳ ಜೊತೆಗೆ ಪುರಾಣ ಪ್ರವಚನಗಳ ಮೂಲಕ ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವ ಕಾರ್ಯವನ್ನು ಮಠವು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಉತ್ಸವ ಕಾರ್ಯಕ್ರಮಗಳ ವಿವರ ಮಾ. 4ರಂದು ಮಠದ ಪದ್ಧತಿಯಂತೆ ಹುಣ್ಣಿಮೆ ಕಟ್ಟಳೆ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ಸಾನಿಧ್ಯದಲ್ಲಿ ಆರಂಭಗೊಳ್ಳಲಿವೆ.

ಬೆಳಿಗ್ಗೆ ಕೋಡಿಮಠ ಮತ್ತು ಮಹದೇಶ್ವರ ಬೆಟ್ಟದಲ್ಲಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಅಣ್ಣಾಯಕನಹಳ್ಳಿ ಹಾಗೂ ಹಾರನಹಳ್ಳಿ ಹರಳಕಟ್ಟಾ ಭಕ್ತರಿಂದ ಮಹಾ ಸಿಂಹಾಸನ ಪೂಜೆ ಜರುಗಲಿದೆ. ಮಾಡಾಳು ಮುದ್ದೇಗೌಡರ ವಂಶಸ್ಥರು ಮತ್ತು ಬಂಧು ವರ್ಗದವರಿಂದ ರಜತ ಪಲ್ಲಕ್ಕಿ ಪೂಜೆ ನೆರವೇರಲಿದೆ. ಸಂಜೆ 6 ಗಂಟೆಗೆ ಶ್ರೀಗಳ ಸಾನಿಧ್ಯದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ.

ಮಾ.5 ರಂದು ಜಗದ್ಗುರುಗಳು ಭಕ್ತರೊಂದಿಗೆ ಪಾದಯಾತ್ರೆಯಲ್ಲಿ ಹಾರನಹಳ್ಳಿ ಪ್ರವೇಶಿಸಿ, ಭಕ್ತರ ಮನೆಗಳಲ್ಲಿ ಪಾದಪೂಜೆ ಸ್ವೀಕರಿಸಿ ಭಿಕ್ಷಾಟನೆ ನಡೆಸಲಿದ್ದಾರೆ. ರಾತ್ರಿ 8 ಗಂಟೆಗೆ ಜಡೆ ಸಂಸ್ಥಾನ ಮಠದ ಮಹಾಂತ ಶಿವಯೋಗಿಗಳ ಪಾದಪೂಜೆ ಜರುಗಲಿದೆ.

ಮಾ.6 ರಂದು ವಿವಿಧ ಕಲಾತಂಡಗಳೊಂದಿಗೆ ಶ್ರೀಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾರನಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಬಳಿಕ ಪಲ್ಲಕ್ಕಿ ಉತ್ಸವ ಮಹದೇಶ್ವರ ಬೆಟ್ಟಕ್ಕೆ ತೆರಳಿ, ಹೆಜ್ಜೆ ನಮಸ್ಕಾರ, ಮಹಿಳೆಯರಿಂದ ಗೂಗ್ಗಳೋತ್ಸವ ಹಾಗೂ ಮುತ್ತೈದೆಯರ ಸೇವೆ ನಡೆಯಲಿದೆ. ಶ್ರೀಗಳು ಲಿಂಗಾನುಲಿಂಗ ಪೂಜಾ ಅನುಷ್ಠಾನ ನೆರವೇರಿಸಲಿದ್ದಾರೆ.

ಮಹದೇಶ್ವರರ ಪವಾಡದ ಪ್ರಸಾದ

ಜಾತ್ರೆಯ ಸಂದರ್ಭದಲ್ಲಿ ಶ್ರೀಗಳ ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದ ಮುಗಿದ ಬಳಿಕ ಉಳಿದ ಅನ್ನವನ್ನು ಪ್ರಸಾದದ ಗುಂಡಿಯಲ್ಲಿ ವಿಸರ್ಜಿಸಿ, ಹಾಸುಗಲ್ಲು ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತದೆ. ಭಕ್ತರ ನಂಬಿಕೆಯಂತೆ, ಮುಂದಿನ ವರ್ಷದ ಜಾತ್ರೆಯ ವೇಳೆ ಆ ಗುಂಡಿಯನ್ನು ತೆರೆಯುವಾಗ ಕಳೆದ ವರ್ಷದ ದಾಸೋಹ ಯಾವುದೇ ಹಾನಿಯಾಗದೆ, ಹೊಸದಾಗಿ ಇಟ್ಟಂತೆಯೇ ಇರುವುದನ್ನು ಮಹದೇಶ್ವರರ ಪವಾಡವೆಂದು ಪರಿಗಣಿಸಲಾಗುತ್ತದೆ.

ಸಂಜೆ 6 ಗಂಟೆಗೆ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ನಾಡಿನ ವಿವಿಧ ಮಠಾಧೀಶರು, ಶಾಸಕರು, ಮಾಜಿ ಶಾಸಕರು, ಸಾಹಿತಿಗಳು, ವಿದ್ವಾಂಸರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

Here, every month’s Hannime Kattalle, Karthika month’s Lakshadweep festival and Palguna month’s festival take place. The ongoing Shri Mahadeshwar Jatra Mahotsav has special significance. Along with religious activities, the work of creating religious awareness in the society through mythological discourses. The Mathva is continuously being carried out.