ಹಾಸನ: ಸ್ಕಾಲರ್ಸ್ ಶಾಲೆಯಲ್ಲಿ ಮಕ್ಕಳು–ಶಿಕ್ಷಕರ ಸಂಭ್ರಮದ ಮಕ್ಕಳ ದಿನಾಚರಣೆ

ಹಾಸನ: ನಗರದ ಸ್ಕಾಲರ್ಸ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜವಹರಲಾಲ ನೆಹರುರವರ ಜನುಮದಿನವಾದ ನವೆಂಬರ್ 14ರಂದು ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಶಿಕ್ಷಕರು ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

“ಇಂದಿನ ಮಕ್ಕಳು ನಾಳಿನ ಭಾರತದ ನಿರ್ಮಾಪಕರು” ಎಂಬ ಸಂದೇಶವನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ನೆಹರುರವರ ಜೀವನ ಹಾಗೂ ರಾಷ್ಟ್ರನಿರ್ಮಾಣದಲ್ಲಿ ಅವರ ಪಾತ್ರವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ವಾತ್ಸಲ್ಯಮಯ ಸ್ವಭಾವದ ಕಾರಣ ಮಕ್ಕಳು ನೆಹರುರನ್ನು “ಚಾಚಾ” ಎಂದು ಕರೆಯುವ ಪರಂಪರೆಯನ್ನೂ ಶಾಲಾ ಶಿಕ್ಷಕರು ಹಂಚಿಕೊಂಡರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳ ಮನರಂಜನೆಗಾಗಿ ಶಿಕ್ಷಕರು ಏಕಪಾತ್ರಾಭಿನಯ, ನೃತ್ಯ, ಗೀತೆಗಳ ಕಾರ್ಯಕ್ರಮಗಳನ್ನು ನೀಡಿದರು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.

“ದೇಶಕ್ಕಾಗಿ ನಾವು ಏನು ಮಾಡಬಹುದು ಎಂಬುದೇ ನಮ್ಮ ಚಿಂತನೆ ಆಗಬೇಕು” ಎಂಬ ನೆಹರುರವರ ಮಾತುಗಳನ್ನು ಸ್ಮರಿಸಿದ ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್ ಅವರು ಮಕ್ಕಳಿಗೆ ಮಕ್ಕಳ ದಿನದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಮತಿ ಮಮತಾ ಚಂದ್ರಶೇಖರ್, ಶಿಕ್ಷಕ–ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸ್ಕಾಲರ್ಸ್ ಶಾಲೆಯು ನೆಹರುರವರ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳೆದು ಬರಲೆಂದು ಹಾರೈಸಿದೆ.