ಸಕಲೇಶಪುರ : ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವೆ ಅವರನ್ನು ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ ಎಂದು ಸಿಎಂ ಸಿದ್ದರಾಮಯ್ಯನವರನ್ನ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಜಿಎಸ್ಟಿ ಕಡಿಮೆ ಮಾಡಿದ್ದಕ್ಕೆ ನಮಗೆ ನಷ್ಟ ಎಷ್ಟು ಗೊತ್ತಾ?ಜಿಎಸ್ಟಿ ತಂದಿದ್ದು ನರೇಂದ್ರ ಮೋದಿಯವರು. ಮಧ್ಯದಲ್ಲಿ ಅದನ್ನ ಕಡಿಮೆ ಮಾಡಿದ್ದಾರೆ. 12% ಗೋಥ್ ಇತ್ತು, ಈಗ 3%ಗೆ ಬಂದಿದೆ. ಇದನ್ನೆಲ್ಲಾ ನೀವು ಕೇಳೋದೆ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಮಿಸ್ಟರ್… ಮಿಸಸ್… ಎಂತವಳು ಅವಳು ನಿರ್ಮಲಾ ಸೀತಾರಾಮನ್ ಹೇಳಿದ್ದು ಅಂತ ಏಕವಚನದಲ್ಲಿ ಮಾತನಾಡಿದ್ದರು.
ಇದೀಗ ಈ ಹೇಳಿಕೆ ವಿವಾದ ಸೃಷ್ಟಿಸಿದ್ದು ಸಿಎಂ ಹೇಳಿಕೆ ವಿರುದ್ಧ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ತೀವ್ರವಾಗಿ ಖಂಡಿಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಸಿಎಂ ಹೇಳಿಕೆ ಪ್ರಶ್ನೆ ಮಾಡಿದರೆ, ತಮ್ಮದು ಗ್ರಾಮೀಣ ಭಾಷೆ, ತಾವು ಹಳ್ಳಿಯಿಂದ ಬಂದವರು ಎಂಬ ಬುರುಡೆ ಸಮಜಾಯಿಷಿ ಕೊಡುತ್ತಾರೆ. ಅದೇ ಇಂದಿರಾ ಗಾಂಧಿ ಅವರನ್ನ ಅಥವಾ ಸೋನಿಯಾ ಗಾಂಧಿ ಅವರನ್ನ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನ ಇದೇ ಭಾಷೆಯಲ್ಲಿ, ಇದೇ ಧಾಟಿಯಲ್ಲಿ “ಎಂಥವಳೋ ಅವಳು?” ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ? ಎಂದು ಸವಾಲ್ ಹಾಕಿದ್ದಾರೆ.
ಮಹಿಳೆಯರನ್ನ ತುಚ್ಛವಾಗಿ ಕಾಣುವ ಕಾಂಗ್ರೆಸ್ ಪಕ್ಷದ ಈ ಕೀಳು ಮನಸ್ಥಿತಿಯನ್ನ ಕರ್ನಾಟಕದ ಸ್ವಾಭಿಮಾನಿ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ










