ಅರಕಲಗೂಡು : ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀಧರ್ಗೌಡ ಅಕ್ರಮ ದುಡ್ಡಿನ ದುಹಂಕಾರದಿಂದ ನನ್ನ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಈ ದುರಂಕಾರದ ಧೋರಣೆ ಮುಂದುವರಿದರೇ ತಕ್ಕಪಾಠವನ್ನು ಕ್ಷೇತ್ರದ ಜನತೆ ಮುಂದಿನ ದಿನಗಳಲ್ಲಿ ಕಲಿಸಲಿದ್ದಾರೆ ಎಂದು ಶಾಸಕ ಎ.ಮಂಜು ಅವರು ಎಚ್ಚರಿಕೆ ನೀಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ರಾಜಕೀಯ ಕ್ಷೇತ್ರಕ್ಕೆ ಬಂದು ಹತ್ತು ಚುನಾವಣೆಗಳನ್ನು ಎದುರಿಸಿದ್ದೇನೆ.ನಾಲ್ಕುಬಾರಿ ಶಾಸಕ,ಸಚಿವನಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ.ನನ್ನ ಹಿಂದಿನ ಕಾಲೇಜಿನ ಜೀವನ.ಹೋರಾಟವನ್ನು ಒಮ್ಮೆ ಶ್ರೀಧರ್ಗೌಡ ನೆನಪಿಸಿಕೊಂಡರೇ ಒಳ್ಳೆಯದು.ಎಲ್ಲವನ್ನು ಮೀರಿ ರಾಜಕೀಯಕ್ಕೆ ಬಂದವನಾಗಿದ್ದೇನೆ.ಈ ಬಗ್ಗೆ ಅರಿವು ಇದ್ದರೇ ಮುಂದೆ ಅವರಿಗೆ ಒಳ್ಳೆಯದು ಎಂದು ಬುದ್ದಿವಾದ ಹೇಳಿದರು.
ಕೆಲವು ದಿನಗಳ ಹಿಂದೆ ನಾನು ಪಟ್ಟಣದ ಅಭಿವೃದ್ಧಿ ಹಿನ್ನೆಲೆ ತಯಾರಾಗಿರುವ ಪ್ಲಾನ್ ಬಗ್ಗೆ ಜನರು ಎಚ್ಚರಿಕೆ ವಹಿಸುವ ಕುರಿತು ಮಾದ್ಯಮ ಹೇಳಿಕೆ ನೀಡಿದ್ದೆ.ಶ್ರೀಧರ್ಗೌಡ ಅಥವಾ ನಗರ ಯೋಜನಾ ಪ್ರಾಧಿಕಾರದ ಪದಾಧಿಕಾರಿಗಳ ವಿರುದ್ಧ ಅಲ್ಲ.ಶಾಸಕನಾಗಿ ಜನರಿಗೆ ತಿಳುವಳಿಕೆ ನೀಡುವುದು ನನ್ನ ಕರ್ತವ್ಯವಾಗಿದೆ.
ಇದನ್ನು ವಯಕ್ತಿಕವಾಗಿ ತೆಗೆದುಕೊಂಡು ನನ್ನ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿರುವುದನ್ನು ಸಹಿಸುವುದಿಲ್ಲ.ನನ್ನ ಹೇಳಿಕೆ ಕುರಿತ ಸ್ಪಷ್ಟಣೆಯನ್ನು ನೊಂದವರು ಸದ್ಯದಲ್ಲಿಯೇ ತಿಳಿಸುವ ಕೆಲಸವನ್ನು ಮಾಡಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ನಾನು,ಮಾಜಿ ಸಚಿವ ಕೆ.ಬಿ.ಮಲ್ಲಪ್ಪ,ನಂಜೇಗೌಡ ಮತ್ತು ರಾಮಸ್ವಾಮಿ ಅವರು ಎಂದಿಗೂ ಕೂಡ ವಯಕ್ತಿಕವಾಗಿ ನಿಂದಿಸುವ ಕೆಲಸವನ್ನು ಮಾಡಿಲ್ಲ.ಬದಲಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆರೋಗ್ಯಕರ ಪದಬಳಕೆ ಮಾಡಿದ್ದೇವೆ. ಶ್ರೀಧರ್ಗೌಡ ರೇವಣ್ಣ,ಭವಾನಿ ರೇವಣ್ಣ ಅವರೊಂದಿಗೆ ಒಡನಾಟವನ್ನು ಇಟ್ಟುಕೊಂಡು ರಿಯಲ್ ಎಸ್ಟೇಟ್ ಮಾಡಿ ಅಕ್ರಮ ಹಣಗಳಿಕೆ ಮಾಡಿರುವುದು ಗೊತ್ತಿದೆ.
ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಆಣೆ ಪ್ರಮಾಣ ಇದುವರೆಗೂ ಬಂದಿರಲಿಲ್ಲ.ಅಕ್ರಮ ಹಣಗಳಿಕೆ ಮಾಡಿರುವ ಶ್ರೀಧರ್ಗೌಡರಿಂದ ಶುರುವಾಗಿದೆ.ಈತ ಪೊಲೀಸ್ ಹೌಸಿಂಗ್ ಸೊಸೈಟಿಯಲ್ಲಿ ದುಡ್ಡನ್ನ ಮಾಡಿ,ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಬಂದಿರುವ ಕುರಿತು ನಾನು ಪಿಟಿಸಿಎಲ್ ಕಮಿಟಿಯಲ್ಲಿ ದೂರು ಕೊಟ್ಟಿದ್ದೇನೆ.ಅದಕ್ಕೆ ಈರೀತಿಯಲ್ಲಿ ನನ್ನ ವಿರುದ್ಧ ಆರೋಪ ಮಾಡಲು ಕಾರಣವಾಗಿದೆ.ಕಾನೂನು ಏನಿದೆ ಅದು ಮುಂದಿನ ದಿನಗಳಲ್ಲಿ ಆಗಲಿದೆ ಎಂದು ಹೇಳಿದರು.
ರಾಜಕೀಯಕ್ಕೆ ಬರುವ ಆತುರದಲ್ಲಿ ಎದುರಾಳಿಗಳನ್ನು ನಿಂದಿಸುವ ಕೆಲಸಕ್ಕೆ ಯಾರೂ ಕೂಡ ಮುಂದಾಗಬಾರದು.ಇದು ನನ್ನ ಅನುಭವದ ಮಾತಾಗಿದೆ.ಮಾಜಿ ಸಚಿವ ಹೆಚ್.ಎನ್.ನಂಜೇಗೌಡರು,ಮಾಜಿ ಪ್ರಧಾನಿ ದೇವೇಗೌಡ,ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಮನೆಗಳನ್ನು ನಾನು ಹಾಳುಮಾಡಿದ್ದೇನೆ ಎಂಬ ಶ್ರೀಧರ್ಗೌಡ ಹೇಳಿಕೆಯನ್ನು ಗಮನಿಸಿದ್ದೇನೆ.ಇದು ನಿಜವಾಗಿದ್ದರೇ ಈ ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದ ಅವರು,ದೇವೇಗೌಡರು ಚುನಾವಣೆಯಲ್ಲಿ ಸೋತು ಶೋಚನೀಯ ಸ್ಥಿತಿಯಲ್ಲಿದ್ದು ಪುನಃ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ನಾನು ಅವರನ್ನು ಬೆಂಬಲಿಸಿದ್ದೇನೆ.ಅದೇ ರೀತಿ ಪುಟ್ಟಸ್ವಾಮಿಗೌಡರ ಮೊಮ್ಮಗನನ್ನು ನಾನು ಜಿಪಂ ಸದಸ್ಯನ್ನಾಗಿ ಮಾಡಿದ್ದೇನೆ.ಅದೇ ರೀತಿ ನಂಜೇಗೌಡರ ಕುಟುಂಬ ನನ್ನ ಕುಟುಂಬವಾಗಿದೆ.ಇದನ್ನು ಅರ್ಥಮಾಡಿಕೊಳ್ಳದೇ ಕೇವಲ ರಾಜಕೀಯ ದ್ವೇಷದಿಂದ ಸುಳ್ಳನ್ನು ಹೇಳಬಾರದು ಎಂದು ಎಚ್ಚರಿಸಿದರು.
ನಾನು ಸಚಿವನಾಗಿದ್ದ ವೇಳೆ ಮೋಕಲಿ ಬಳಿ ಪಶು ಆಹಾರ ಘಟಕವನ್ನು ತೆರೆಯಲು ಚಾಲನೆ ನೀಡಿದ್ದೆ.ಇದರಲ್ಲಿ ಪಾಲುದಾರಿಕೆ ಪಡೆಯಬೇಕಿದ್ದರೇ ಅಂದೇ ಮಾಡಿಕೊಳ್ಳುತ್ತಿದ್ದೆ.ಈಗ ಪ್ಯಾಕ್ಟರಿ ನಡೆಸುವವರಿಂದ ಪಾಲು ಕೇಳುವ ಅನಿವಾರ್ಯತೆ ನನಗಿಲ್ಲ.ರೈತರಿಗೆ ವಿತರಿಸಬೇಕಿದ್ದ ಯೂರಿಯನ್ನು ಅಕ್ರಮವಾಗಿ ಪ್ಯಾಕ್ಟರಿ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ದೂರು ದಾಖಲಾದ ಹಿನ್ನೆಲೆ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ.ಈ ಪ್ಯಾಕ್ಟರಿಯಿಂದ ಯಾರಿಗೆ ಹಣ ಹೋಗಿದೆ ಎಂಬುದು ನನಗೆ ಗೊತ್ತಿದೆ.ಇದನ್ನು ಕೂಡ ಮುಂದಿನ ದಿನಗಳಲ್ಲಿ ಸಾಬೀತುಪಡಿಸುವೆ ಎಂದು ಮಂಜು ಸವಾಲು ಹಾಕಿದರು.










