ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತುಮಕೂರು ಜಿಲ್ಲಾ ಸಂಘ ಮತ್ತು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಕರ್ನಾಟಕ ಸುವರ್ಣ ಸಂಭ್ರಮ ನೆನಪಿನ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅವರ ನಿವಾಸ ಕಾವೇರಿಯಲ್ಲಿ ಅನಾವರಣಗೊಳಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ತುಮಕೂರಿನಲ್ಲಿ ಡಿಸೆಂಬರ್ ನಲ್ಲಿ ಆಯೋಜಿಸಲಿರುವ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಅಗತ್ಯ ಪೂರ್ವ ಸಿದ್ಧತೆಯನ್ನು ನಡೆಸುತ್ತಿದ್ದು ಉದ್ಘಾಟಿಸಲು ಸಮಯವಕಾಶ ಕೊಡಬೇಕೆಂದು ಮುಖ್ಯಮಂತ್ರಿಗಳನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಮನವಿ ಮಾಡಿತು.
ಡಿಸೆಂಬರ್ ನಲ್ಲಿ ಸಮ್ಮೇಳನ ಮಾಡಿದರೆ ಅಧಿವೇಶನ ಇರುವುದರಿಂದ ಬರುವುದು ಕಷ್ಟವಾಗಬಹುದು. ಜನವರಿಯಲ್ಲಿ ಮಾಡಿದರೆ ಖಂಡಿತವಾಗಿ ಬರುತ್ತೇನೆ. ಅಗತ್ಯ ಸಹಕಾರವನ್ನು ಕೊಡಲು ತಿಳಿಸುತ್ತೇನೆ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಮತ್ತೊಮ್ಮೆ ಶುಭ ಹಾರೈಸಿದರು.
ಸಂಘದ ಜಿಲ್ಲಾಧ್ಯಕ್ಷ ಚಿ. ನಿ. ಪುರುಷೋತ್ತಮ್ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನು ಶಾಂತರಾಜು, ಟಿ.ಎನ್. ಮಧುಕರ್ , ಡಿ.ಎಂ.ಸತೀಶ್ ಮತ್ತು ಪದಾಧಿಕಾರಿಗಳು ನಿಯೋಗದಲ್ಲಿದ್ದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಕ್ರೀಡಾಕೂಟಕ್ಕೆ ಆಹ್ವಾನಿಸಲಾಯಿತು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಕ್ರೀಡಾ ಸಮಿತಿ ಮುಖ್ಯ ಸಂಚಾಲಕರಾದ ಸತೀಶ್ ಹಾರೋಗೆರೆ, ಯಶಸ್ ಪದ್ಮನಾಭ್, ಎಸ್. ಹರೀಶ್ ಆಚಾರ್ಯ ಮತ್ತಿತರರು ಹಾಜರಿದ್ದರು.











