ಹಾಸನ: ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವದ ವೇಳೆ ಖಾಜಿ ಕುಟುಂಬ ಸದಸ್ಯರಿಂದ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ಬೇಲೂರು ಚನ್ನಕೇಶವ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಹಿಂದು ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ, ಹೋಮ, ಹವನ ನಡೆಸಬೇಕು. ಶ್ರೀ ಚನ್ನಕೇಶವ ದೇವಸ್ಥಾನ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಧೀನಕ್ಕೆ ಒಳಪಟ್ಟಿದೆ.
ಮ್ಯಾನ್ಯುಯಲ್ ಕೈಪಿಡಿಯಲ್ಲಿ ರಥೋತ್ಸವದ ದಿನದಂದು ಮೇದೂರು ಖಾಜಿ ಸಾಹೇಬರ ಕುಟುಂಬದವರಿಗೆ ಮರ್ಯಾದೆ ಮತ್ತು ಧಾನ್ಯ ಕಾಣಿಕೆ ನೀಡಬೇಕು ಎಂದು ಉಲ್ಲೇಖ ಇದೆ.
ಆದರೆ ರಥದ ಎದುರು ಕುರಾನ್ ಪಠಣ ಮಾಡಬೇಕು ಎಂದು ಎಲ್ಲೂ ಸೂಚಿಸಿಲ್ಲ. ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಯಾವುದೇ ಅನ್ಯ ಧರ್ಮೀಯರ ಆಚರಣೆ, ಚಟುವಟಿಕೆ ಹಾಗೂ ಪಠಣ ಮಾಡಲು ಅವಕಾಶವಿಲ್ಲ.
ಆದ್ದರಿಂದ ಏ.20ರಂದು ಆಯೋಜನೆಯಾಗಿರುವ ರಥೋತ್ಸವದಲ್ಲಿ ಕುರಾನ್ ಪಠಣ ಮಾಡಲು ಅವಕಾಶ ನೀಡಿದಬಾರದು ಎಂದು ಕೋರಿ ತಾಲೂಕು ಕಚೇರಿ ಶಿರಸ್ತೇದಾರ್ ರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮಂಜು, ಕೃಷ್ಣೇಗೌಡ ಮುಂತಾದವರಿದ್ದರು.










