ಚಿನ್ನಾಭರಣಕ್ಕಾಗಿ ಒಂಟಿ ವೃದ್ಧೆಯ ಹತ್ಯೆ: ಕಾಯಿಲೆಯಿಂದ ಮೃತಪಟ್ಟಿದ್ದಾರೆಂದು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಸಂಬಂಧಿಕರಿಗೆ ಸುಳಿವು ನೀಡಿತು ಆ ಗಾಯ

An incident in which an elderly woman who lived alone was killed and her jewellery was stolen took place near Revanna Circle in Channarayapatna.

ಹಾಸನ, ಜೂನ್ 18: ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರನ್ನು ಕೊಂದು ಚಿನ್ನಾಭರಣ ದೋಚಿದ ಘಟನೆ ಚನ್ನರಾಯಪಟ್ಟಣದ ರೇವಣ್ಣ ವೃತ್ತದ ಬಳಿ ನಡೆದಿದೆ.

 ಕಮಲಮ್ಮ (68) ಮೃತ ವೃದ್ಧೆ.  ದುಷ್ಕರ್ಮಿಯೊಬ್ಬ ಚಿನ್ನಾಭರಣಕ್ಕಾಗಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ನಿವೃತ್ತ ವಿಲೇಜ್ ಅಕೌಂಟೆಂಟ್ ಆಗಿದ್ದ ಅವರ ಪತಿ ಹಾಗೂ ಇಬ್ಬರು ವಿಶೇಷ ಚೇತನ ಮಕ್ಕಳು ಮೃತರಾದ ನಂತರ ಕಮಲಮ್ಮ ಒಂಟಿಯಾಗಿದ್ದರು. ಅವರ ಮನೆಗೆ ಅಪರಿಚಿತನೊಬ್ಬ ನುಗ್ಗಿ, ಚಿನ್ನಾಭರಣ ಕಸಿದುಕೊಂಡು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.

ಪ್ರಾರಂಭದಲ್ಲಿ, ಬಿಪಿ ಮತ್ತು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದ  ಕಮಲಮ್ಮ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದ ಸಂಬಂಧಿಕರು, ಮೃತದೇಹಕ್ಕೆ ಹೂವಿನ ಹಾರ ಸಮರ್ಪಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಕುತ್ತಿಗೆ ಮತ್ತು ಕಿವಿಯ ಬಳಿ ಗಾಯದ ಗುರುತುಗಳನ್ನು ಗಮನಿಸಿದ ಸಂಬಂಧಿಕರು ಅನುಮಾನಗೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿನ್ನಾಭರಣಕ್ಕಾಗಿ ಕೊಲೆ ನಡೆದಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಲು ಚನ್ನರಾಯಪಟ್ಟಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.