ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸದಲ್ಲಿ ಜಿಲ್ಲಾಧಿಕಾರಿ ಅವರು ಒಂದು ಪಕ್ಷದ ಏಜೆಂಟರಂತೆ ವರ್ತಿಸಿದ್ದು, ಸರ್ಕಾರ ಡಿಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನಾಂಬೆ ಜಾತ್ರಾ ಮಹೋತ್ಸವ ಹಾಸನಕ್ಕೆ ಸೀಮಿತವಾದ ಕಾರ್ಯಕ್ರಮ.ಆದರೆ ಇವರು ಹೆಸರು, ಹಣ ಮಾಡಿಕೊಳ್ಳಲು ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗಾಗಿ ಮಾಡಿದ ಜಾತ್ರೆಯಂತಿತ್ತು. ನಮ್ಮೂರಿನ ಜನರಿಗೆ ದೇವಸ್ಥಾನದ ಅಕ್ಕ ಪಕ್ಕದವರಿಗೆ ಆದ ಲಾಭವೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬಿಜೆಪಿ, ಜಿಲ್ಲಾಧ್ಯಕ್ಷರಿಗೆ ಸನ್ಮಾನ ಮಾಡುತ್ತಾರೆ ಇದು ಇವರ ಶಿಷ್ಟಾಚಾರ, ಮಾಜಿ ಸಚಿವರು, ಶಾಸಕರನ್ನು ಆಹ್ವಾನಿಸಿಲ್ಲ. ನಿಮಗೆ ಇಷ್ಟ ಬಂದ ಹಾಗೆ ಮಾಡುಬಹುದಾ ಎಂದು ಪ್ರಶ್ನಿಸಿದರು. ಜಿಲ್ಲಾಡಳಿತದಿಂದ ಈ ಬಾರಿ ಯಾರಿಗೆ ಎಷ್ಟು ಪಾಸ್ ನೀಡಿದ್ದೀರಿ ಎಂಬ ಮಾಹಿತಿ ನೀಡಬೇಕು, ನಾನು ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರು ಶಾಸಕರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಸ್ಥಳೀಯರಿಗೆ ಅನ್ಯಾಯ ಆಗಿದ್ದರೂ ಒಂದು ಮಾತೂ ಆಡಿಲ್ಲ. ತಮ್ಮ ಪಕ್ಷದ ನಾಯಕರಿಗೆ ಅಗೌರವ ಆದರೂ ತುಟಿ ಬಿಚ್ಚದೆ ಮೌನವಹಿಸಿದ್ದಾರೆ. ಸ್ಥಳೀಯ ಶಾಸಕರು ಒಂದು ರೀತಿ ಹಾಲು ಕೊಡದ, ಹಾಯಲು ಬಾರದ ಹಸುವಿದ್ದಂತೆ. ಇಂತಹ ಹಸು ನಮ್ಮ ಅಗತ್ಯವಿಲ್ಲ. ರಾಜೀನಾಮೆ ಕೊಟ್ಟು ಹೋಗಲಿ ಎಂದು ಕಿಡಿಕಾರಿದರು.ಇಲ್ಲದಿದ್ದರೆ ಅವರ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಮುಖಂಡ ಮಂಜೇಗೌಡ ಇದ್ದರು.










