ಹಾಸನ: ಬೇಲೂರು ತಾಲ್ಲೂಕಿನ ಅಡವಿಬಂಟೇನಹಳ್ಳಿ ಗ್ರಾಮದಲ್ಲಿ ರೈತರ ಮತ್ತು ಅರಣ್ಯ ಇಲಾಖೆಯ ನಡುವೆ ಭೂ ವಿವಾದ ತೀವ್ರಗೊಂಡಿದ್ದು, ಭೂಮಿ ವಶಪಡಿಸಿಕೊಳ್ಳಲು ಅರಣ್ಯ ಇಲಾಖೆ ತೆಗೆದಿದ್ದ ಕಂದಕವನ್ನು ಗ್ರಾಮಸ್ಥರು ಮುಚ್ಚುವ ಮೂಲಕ ಭೂಮಿಯನ್ನು ಮರಳಿ ಸ್ವಾಧೀನಕ್ಕೆ ಪಡೆದಿದ್ದಾರೆ.
ರೈತರಿಗೆ ಮಂಜೂರಾಗಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ವಾದಿಸಿ, ಜಮೀನಿನ ಮಧ್ಯಭಾಗದಲ್ಲಿ ರಾತ್ರೋರಾತ್ರಿ ಕಾಲುವೆ ತೆಗೆಯಲಾಗಿತ್ತು.
ಇದಕ್ಕೆ ಪ್ರತಿಯಾಗಿ, ಗ್ರಾಮಸ್ಥರು ಹಾಗೂ ರೈತ ಮಹಿಳೆಯರು ಒಗ್ಗೂಡಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆ ತೆಗೆದ ಕಾಲುವೆಯನ್ನು ಮುಚ್ಚಿದ್ದಾರೆ. ಕೈಯ್ಯಲ್ಲಿ ಕೆಪಿಆರ್ಎಸ್ ಬಾವುಟ ಹಿಡಿದು ನಿಂತ ಕೆಲವು ರೈತರು ಅರಣ್ಯ ಇಲಾಖೆ ವಿರುದ್ಧ ಹರಿಹಾಯ್ದರು. ಗ್ರಾಮಸ್ಥರು, ಹಾರೆ, ಗುದ್ದಲಿ ಹಿಡಿದು ಕಾಲುವೆಗೆ ಮಣ್ಣು ತುಂಬಿ ಭೂಮಿಯನ್ನು ಮರುವಶಕ್ಕೆ ಪಡೆದರು.










