ಹಾಸನ: ಶ್ರಾವಣ ಮಾಸದ ಪೂರ್ಣಿಮೆಯ ಪವಿತ್ರ ದಿನವಾದ ಶನಿವಾರದಂದು, ನಗರದ ಬ್ರಾಹ್ಮಣ ಸಭಾ ವತಿಯಿಂದ ಶಂಕರ ಮಠದಲ್ಲಿ ಋಗ್ವೇದ ಮತ್ತು ಯಜುರ್ವೇದ ಉಪಾಕರ್ಮ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಗರದ ಅನೇಕ ವಿಪ್ರರು ಪಾಲ್ಗೊಂಡು ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿಗಳನ್ನು ಪಾಲಿಸಿದರು.
ಕಾರ್ಯಕ್ರಮದ ಅಂಗವಾಗಿ ವಿಪ್ರರು ಪ್ರಾಜಾಪ್ರತ್ಯಾದಿ ನವಕಾಂಡ ಋಷಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವ, ಋಷಿ ಮತ್ತು ಪಿತೃತರ್ಪಣಗಳನ್ನು ನೀಡಿ, ಪೂರ್ವಜರ ಸ್ಮರಣೆ ಮಾಡಿದರು. ಈ ಪವಿತ್ರ ವಿಧಿಗಳ ನಂತರ ನೂತನ ಯಜ್ಞೋಪವೀತ (ಜನಿವಾರ) ಧಾರಣೆ ಮಾಡಲಾಯಿತು. ಆಚಾರ್ಯ ಮುಖೇನ ವರ್ಷಕ್ಕೊಮ್ಮೆ ನಡೆಸುವ ವಿರಜಾಹೋಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಬ್ರಹ್ಮ ಶ್ರೀ ಕೇಶವ ಶರ್ಮ ಅವರು, ಉಪಾಕರ್ಮದ ಮಹತ್ವವನ್ನು ವಿವರಿಸಿದರು. *”ಇದು ಕೇವಲ ಒಂದು ಧಾರ್ಮಿಕ ವಿಧಿಯಲ್ಲ, ಇದು ಹಿಂದೂ ಸಂಪ್ರದಾಯದ ಒಂದು ಪ್ರಮುಖ ಆಚರಣೆಯಾಗಿದೆ. ಈ ದಿನದಂದು ವೇದಾಧ್ಯಯನವನ್ನು ಪುನರಾರಂಭಿಸಲು ಸಂಕಲ್ಪ ಮಾಡಲಾಗುತ್ತದೆ. ಹೊಸ ಯಜ್ಞೋಪವೀತ ಧರಿಸುವ ಮೂಲಕ ಬ್ರಾಹ್ಮಣರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನೆನಪಿಸಿಕೊಳ್ಳುತ್ತಾರೆ” ಎಂದು ತಿಳಿಸಿದರು.
ಜ್ಞಾನ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಪ್ರತೀಕವಾಗಿರುವ ಈ ಕಾರ್ಯಕ್ರಮವು ವೇದಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಉದ್ದೇಶವನ್ನೂ ಹೊಂದಿದೆ ಎಂದು ಅವರು ಹೇಳಿದರು. ಈ ಪವಿತ್ರ ಆಚರಣೆಯಲ್ಲಿ ಭಾಗವಹಿಸಿದ ವಿಪ್ರರು ಸಂತೋಷ ಮತ್ತು ಧನ್ಯತಾ ಭಾವ ವ್ಯಕ್ತಪಡಿಸಿದರು.
ಋಗ್ವೇದ ಉಪಾಕರ್ಮವನ್ನು ವೇದಮೂರ್ತಿ ಗಣೇಶಶರ್ಮಾ ಮತ್ತು ಯಜುರ್ವೇದ ಉಪಾಕರ್ಮವನ್ನು ಕೇಶವಪ್ರಸಾದಶರ್ಮಾ ಅವರ ಆಚಾರ್ಯತ್ವದಲ್ಲಿ ನಡೆಸಲಾಯಿತು.










