ನವದೆಹಲಿ: ಹಾಸನ ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಗುರುವಾರ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 2 ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 507 ಹೃದಯಾಘಾತ ಪ್ರಕರಣ ವರದಿಯಾಗಿದ್ದು, 140 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಶೇ. 35ರಷ್ಟು ಮಂದಿ 40 ವರ್ಷದೊಳಗಿನವರೇ ಇರುವುದು ಆತಂಕ ಮೂಡಿಸಿದೆ ಎಂದು ಸಂಸದರು ವಿವರಿಸಿದರು.
ಈ ಹಿನ್ನೆಲೆಯಲ್ಲಿ, 15 ರಿಂದ 40 ವರ್ಷದವರಿಗೆ ಕಡ್ಡಾಯ ಹೃದಯ ತಪಾಸಣೆ, ಹಠಾತ್ ಹೃದಯ ನಿಲುಗಡೆ ಪ್ರಕರಣಗಳ ಡಿಜಿಟಲ್ ದಾಖಲೆ, ಸಂಚಾರಿ ತಪಾಸಣಾ ವಾಹನಗಳು ಹಾಗೂ ಐಸಿಎಂಆರ್ (ICMR)ನಿಂದ ವಿಶೇಷ ಅಧ್ಯಯನ ನಡೆಸಲು ಸಂಸದ ಶ್ರೇಯಸ್ ಪಟೇಲ್ ಆಗ್ರಹಿಸಿದರು.










