10.1 C
Munich
Home ಜಿಲ್ಲೆ ಆಪರೇಷನ್ ವಿಕ್ರಾಂತ್: ಮೂರನೇ ದಿನದ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಸಾಥಿ ಬಿಟ್ಟು ಕದಲದ ವಿಕ್ರಾಂತ್

ಆಪರೇಷನ್ ವಿಕ್ರಾಂತ್: ಮೂರನೇ ದಿನದ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಸಾಥಿ ಬಿಟ್ಟು ಕದಲದ ವಿಕ್ರಾಂತ್

ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಕಾಫಿ ತೋಟದಲ್ಲಿ ಕಂಡುಬಂದಿರುವ ಭಾರೀ ಗಾತ್ರದ ಕಾಡಾನೆ ‘ವಿಕ್ರಾಂತ್’ ಸೆರೆಗಾಗಿ ಅರಣ್ಯ ಇಲಾಖೆಯ ‘ಆಪರೇಷನ್ ವಿಕ್ರಾಂತ್’ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ ಎರಡು ದಿನಗಳಿಂದ ಸತತ ಪ್ರಯತ್ನಗಳ ಹೊರತಾಗಿಯೂ ಯಶಸ್ಸು ಸಿಗದಿದ್ದರೂ, ಇಂದು ಮುಂಜಾನೆಯೇ ವಿಕ್ರಾಂತ್ ಇರುವ ಸ್ಥಳವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್) ಸಿಬ್ಬಂದಿ, ಈಗ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಪ್ರಸ್ತುತ, ವಿಕ್ರಾಂತ್ ಇನ್ನೊಂದು ಕಾಡಾನೆ ಜೊತೆಗೆ ಕಾಫಿ ತೋಟದಲ್ಲಿ ನಿಂತಿರುವುದು ಗೊತ್ತಾಗಿದ್ದು, ಇದನ್ನು ಸೆರೆಹಿಡಿಯಲು ಸಾಕಾನೆಗಳ ಸಹಾಯದೊಂದಿಗೆ ಅರವಳಿಕೆ ಚುಚ್ಚುಮದ್ದು (ಟ್ರಾಂಕ್ವಿಲೈಜರ್) ನೀಡುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ. ಈ ಕಾರ್ಯಾಚರಣೆಗಾಗಿ ವೈದ್ಯರ ತಂಡವೂ ಸ್ಥಳಕ್ಕೆ ತೆರಳಿದ್ದು, ಎಚ್ಚರಿಕೆಯಿಂದ ಕೆಲಸ ಆರಂಭಿಸಿದೆ.ಕಾರ್ಯಾಚರಣೆಯಲ್ಲಿ ಪ್ರಶಾಂತ, ಕರ್ನಾಟಕ ಭೀಮ, ಧನಂಜಯ, ಕಂಜನ್, ಹರ್ಷ, ಏಕಲವ್ಯ ಮತ್ತು ಮಹೇಂದ್ರ ಎಂಬ ಸಾಕಾನೆಗಳು ಭಾಗವಹಿಸಿವೆ. ಈ ಆನೆಗಳು ಕಾಡಾನೆಯನ್ನು ಸುತ್ತುವರೆದು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಜೊತೆಗೆ, ಕಳೆದ ಮೂರು ದಿನಗಳಿಂದ ಈ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವ ಡಿಎಫ್‌ಓ (ಡೆಪ್ಯುಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್) ಸೌರಭ್‌ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ದಿನರಾತ್ರಿ ಶ್ರಮಿಸುತ್ತಿದೆ.ಕಳೆದ ಎರಡು ದಿನಗಳಲ್ಲಿ ವಿಕ್ರಾಂತ್ ಸೆರೆಗೆ ಸಾಧ್ಯವಾಗದೇ ಇದ್ದರೂ, ಇಂದಿನ ಪ್ರಯತ್ನದಲ್ಲಿ ಯಶಸ್ಸು ಸಿಗುವ ಆಶಾಭಾವನೆಯನ್ನು ಅರಣ್ಯ ಇಲಾಖೆ ವ್ಯಕ್ತಪಡಿಸಿದೆ.

ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಈ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸುವ ಮೂಲಕ ಮಾನವ-ಪ್ರಾಣಿ ಸಂಘರ್ಷವನ್ನು ತಡೆಯುವ ಗುರಿಯನ್ನು ಇಲಾಖೆ ಹೊಂದಿದೆ.  ಮುಂದಿನ ಕೆಲವು ಗಂಟೆಗಳಲ್ಲಿ ಈ ಆಪರೇಷನ್‌ನ ಫಲಿತಾಂಶ ಗೊತ್ತಾಗಲಿದೆ ಎಂದು ಸ್ಥಳೀಯರು ಎದುರು ನೋಡುತ್ತಿದ್ದಾರೆ.

error: Content is protected !!