ಸಾವು-ಬದುಕಿನ ಮಧ್ಯೆ ‘ವಿಕ್ರಾಂತ್’ ಆನೆ ಹೋರಾಟ: ಸಕ್ರೆಬೈಲು ಆನೆ ಬಿಡಾರದ ನಿರ್ವಹಣೆ ವಿರುದ್ಧ ಆಕ್ರೋಶ
ಶಿವಮೊಗ್ಗ,ಜೂನ್ 16(www.kannadapost.com): ರಾಜ್ಯದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಆರೋಗ್ಯ ಮತ್ತು ನಿರ್ವಹಣೆ ಕುರಿತಾಗಿ ಮತ್ತೆ ಪ್ರಶ್ನೆಗಳು ಉದ್ಭವಿಸಿವೆ. ಬಿಡಾರದಲ್ಲಿರುವ ವಿಕ್ರಾಂತ್ ಆನೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸರಿಯಾದ ಚಿಕಿತ್ಸೆ ದೊರೆಯದೇ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸಕ್ರೆಬೈಲು ಆನೆ ಬಿಡಾರವು ರಾಜ್ಯದ ಪ್ರಮುಖ ಆನೆ ತರಬೇತಿ ಮತ್ತು ಆರೈಕೆ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಆನೆಗಳ ಬದುಕನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ಇತ್ತೀಚಿನ ಬೆಳವಣಿಗೆಗಳು ಆನೆಗಳ ಆರೈಕೆ ವ್ಯವಸ್ಥೆಯ ಬಗ್ಗೆ ಆತಂಕ ಮೂಡಿಸಿವೆ.
ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಸೆರೆ ಹಿಡಿಯಲಾದ ಕಾಡಾನೆ ವಿಕ್ರಾಂತ್ ಅನ್ನು ಸಕ್ರೆಬೈಲು ಬಿಡಾರಕ್ಕೆ ತರಲಾಗಿತ್ತು. ಈ ವೇಳೆ ಆನೆಯ ಕಾಲಿಗೆ ಗಾಯವಾಗಿದ್ದು, ಬಳಿಕ ಗಾಯದಲ್ಲಿ ಸೋಂಕು ಹೆಚ್ಚಾಗಿ ಕೀವು ಉಂಟಾಗಿದೆ ಎನ್ನಲಾಗಿದೆ. ಗಾಯದ ನೋವಿನಿಂದ ವಿಕ್ರಾಂತ್ ಆನೆ ನರಳುತ್ತಿದ್ದರೂ ಅಗತ್ಯ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲಾಗಿಲ್ಲ ಎಂಬ ಆರೋಪ ಪರಿಸರವಾದಿಗಳಿಂದ ಕೇಳಿಬಂದಿದೆ.
ಪರಿಸರವಾದಿ ಜೋಸೆಫ್ ಹೂವಾರ್ ಮಾತನಾಡಿ, “ವಿಕ್ರಾಂತ್ ಆನೆಯ ಇಂದಿನ ಸ್ಥಿತಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಕಾಡಾನೆಗಳನ್ನು ಸೆರೆ ಹಿಡಿದು ಬಿಡಾರಕ್ಕೆ ತರಿದ ಬಳಿಕ ಅವುಗಳ ಆರೈಕೆ ಸಮರ್ಪಕವಾಗಿ ಆಗದಿದ್ದರೆ ಅದರ ಜವಾಬ್ದಾರಿ ಯಾರದ್ದು? ಈ ಆನೆ ಹಿಂದೆ ಬಲಿಷ್ಠವಾಗಿತ್ತು. ಆದರೆ ಈಗ ಅನಾರೋಗ್ಯದಿಂದ ಮರಿಯಾನೆಯಂತೆ ಕಾಣುತ್ತಿದೆ. ತಕ್ಷಣ ಉತ್ತಮ ಚಿಕಿತ್ಸೆ ಮತ್ತು ಆರೈಕೆ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸಕ್ರೆಬೈಲು ಆನೆ ಬಿಡಾರದಲ್ಲಿ ಈ ಹಿಂದೆ ಬಾಲಣ್ಣ ಆನೆಯ ಆರೋಗ್ಯ ಸಮಸ್ಯೆಗೂ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪ ಕೇಳಿಬಂದಿತ್ತು. ಇದೀಗ ವಿಕ್ರಾಂತ್ ಆನೆಯ ಪ್ರಕರಣವೂ ಸಾರ್ವಜನಿಕರ ಗಮನ ಸೆಳೆದಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ರಾಜ್ಯ ಸರ್ಕಾರ ಆನೆಗಳ ಸಂರಕ್ಷಣೆ ಮತ್ತು ಆರೈಕೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ, ನೆಲಮಟ್ಟದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ಅದರ ಉದ್ದೇಶವೇ ವಿಫಲವಾಗುತ್ತದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.
ವಿಕ್ರಾಂತ್ ಆನೆಯ ಆರೋಗ್ಯದ ಬಗ್ಗೆ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಂಡು ಸಮರ್ಪಕ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.










