
ಚನ್ನರಾಯಪಟ್ಟಣ KSRTC ಬಸ್ನಲ್ಲಿ ಮರೆತಿದ್ದ ₹67,500 ನಗದು ಹಾಗೂ ₹1.10 ಲಕ್ಷ ಮೌಲ್ಯದ ಚೆಕ್ ಹೊಂದಿದ್ದ ಬ್ಯಾಗ್ನ್ನು ಚಾಲಕ ಮತ್ತು ನಿರ್ವಾಹಕರು ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ.
📍 ಚನ್ನರಾಯಪಟ್ಟಣ,ಏಪ್ರಿಲ್,17,2026(www.kannadapost.com): ಪ್ರಯಾಣದ ಮಧ್ಯೆ ಬಸ್ನಲ್ಲಿ ಮರೆತು ಬಿಟ್ಟಿದ್ದ ₹67,500 ನಗದು ಹಾಗೂ ₹1.10 ಲಕ್ಷ ಮೌಲ್ಯದ ಸಹಿ ಮಾಡಿದ ಚೆಕ್ ಹೊಂದಿದ್ದ ಬ್ಯಾಗ್ನ್ನು ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಿದ KSRTC ಚಾಲಕ ಮತ್ತು ನಿರ್ವಾಹಕರು ಮಾನವೀಯತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚನ್ನರಾಯಪಟ್ಟಣದಿಂದ ಹಾಸನಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ತಾಂತ್ರಿಕ ದೋಷದ ಹಿನ್ನೆಲೆ ಮಧ್ಯದಲ್ಲೇ ನಿಲ್ಲಿಸಲಾಯಿತು. ಬಳಿಕ ಪ್ರಯಾಣಿಕರನ್ನು ಬದಲಿ ವಾಹನಕ್ಕೆ ಕಳುಹಿಸಲಾಯಿತು. ಈ ವೇಳೆ ಪ್ರಯಾಣಿಕರಾದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ಅವರು ತುರ್ತಿನಲ್ಲಿ ಬ್ಯಾಗ್ನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದಾರೆ.
ನಂತರ ಬಸ್ನ್ನು ದುರಸ್ತಿ ಮಾಡಲು ಚನ್ನರಾಯಪಟ್ಟಣ ಘಟಕಕ್ಕೆ ತರಲಾಗಿದ್ದು, ಬಸ್ ಪರಿಶೀಲನೆ ವೇಳೆ ನಿರ್ವಾಹಕ ಜಗದೀಶ ಹಾಗೂ ಚಾಲಕ ಎನ್.ಸಿ. ಕೃಷ್ಣೇಗೌಡರ ಗಮನಕ್ಕೆ ಬ್ಯಾಗ್ ಬಂದಿದೆ. ಪರಿಶೀಲಿಸಿದಾಗ ಅದರಲ್ಲಿ ದೊಡ್ಡ ಮೊತ್ತದ ನಗದು ಮತ್ತು ಸಹಿ ಮಾಡಿದ ಚೆಕ್ ಇರುವುದನ್ನು ಕಂಡು ಅವರು ತಕ್ಷಣವೇ ಘಟಕ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ.
ಘಟಕ ವ್ಯವಸ್ಥಾಪಕ ಜ್ಞಾನೇಶ್ ಅವರು ಬ್ಯಾಗ್ನಲ್ಲಿದ್ದ ಆಧಾರ್ ಕಾರ್ಡ್ ಆಧರಿಸಿ ಮಾಲೀಕರನ್ನು ಸಂಪರ್ಕಿಸಿದರು. ಈ ನಡುವೆ ಹಣ ಕಳೆದುಕೊಂಡು ಆತಂಕದಲ್ಲಿದ್ದ ಕಪಿಲ್ ಶರ್ಮಾ ಮತ್ತು ಬಾಲಕಿಶನ್ ಶರ್ಮ ಅವರು ಘಟಕಕ್ಕೆ ಬಂದು ತಮ್ಮ ಗುರುತು ದಾಖಲೆಗಳನ್ನು ತೋರಿಸಿ ಬ್ಯಾಗ್ನ್ನು ವಾಪಸ್ ಪಡೆದರು.

ಮಾಹಿತಿಯಂತೆ, ಅವರು ಚನ್ನರಾಯಪಟ್ಟಣದ ವ್ಯಾಪಾರಿಗಳಿಂದ ಸಂಗ್ರಹಿಸಿದ ₹67,500 ನಗದು ಹಾಗೂ ₹1.10 ಲಕ್ಷ ಮೌಲ್ಯದ ಚೆಕ್ಗಳನ್ನು ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.
ಈ ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಬಗ್ಗೆ ಸಾರ್ವಜನಿಕರಿಂದ ಹಾಗೂ ಸಂಸ್ಥೆಯ ಮೇಲಾಧಿಕಾರಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.









