ಬೆಂಗಳೂರು ,ಫೆಬ್ರವರಿ,24,2026(www.kannadapost.com): ಮತ್ತು ಬರುವ ಮಾತ್ರೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹಾಗೂ ಅದಕ್ಕೆ ಪ್ರತಿಯಾಗಿ ಹನಿಟ್ರ್ಯಾಪ್ ಆರೋಪ—ಈ ಎರಡೂ ದೂರುಗಳ ಹಿನ್ನೆಲೆಯಲ್ಲಿ ನಗರದ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ವಿದ್ಯಾರ್ಥಿನಿಯ ದೂರು: ಅಮೃತಹಳ್ಳಿಯಲ್ಲಿ ಎಫ್ಐಆರ್
ತಮಿಳುನಾಡು ಮೂಲದ 19 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆ ಯಲ್ಲಿ ಡಿಕ್ಸನ್ ಸ್ಯಾಂಡ್ರೋ (21) ಮತ್ತು ನಿಖಿಲ್ (35) ವಿರುದ್ಧ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದು, ಇನ್ಸ್ಟಾಗ್ರಾಂ ಮೂಲಕ ಡಿಕ್ಸನ್ ಪರಿಚಯವಾಗಿದ್ದಾನೆ ಎನ್ನಲಾಗಿದೆ. ನಂತರ ಕೋರಮಂಗಲದ ಕೆಫೆಯಲ್ಲಿ ಭೇಟಿಯಾಗಿ ಸ್ನೇಹ ಬೆಳೆದಿದ್ದು, ಫೆಬ್ರವರಿ 14ರಂದು ಜಕ್ಕೂರಿನಲ್ಲಿರುವ ವಿಲ್ಲಾಕ್ಕೆ ಬರಲು ಕರೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ಪ್ರಕಾರ, ವಿಲ್ಲಾದಲ್ಲಿ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ಮತ್ತು ಬರುವ ಮಾತ್ರೆ ನೀಡಿದ್ದು, ಅದರ ಪರಿಣಾಮವಾಗಿ ಅರೆಪ್ರಜ್ಞಾವಸ್ಥೆಗೆ ಜಾರಿದ್ದೆ. ಆ ಸ್ಥಿತಿಯಲ್ಲಿ ಇಬ್ಬರೂ ಲೈಂಗಿಕ ದೌರ್ಜನ್ಯ ಎಸಗಿದ್ದು, ನಂತರ ವಿಷಯವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಘಟನೆಯಿಂದ ಆಘಾತಕ್ಕೊಳಗಾದ ಆಕೆ ಸಹೋದರನ ಸಲಹೆಯಂತೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಪ್ರತಿದೂರು: ಹನಿಟ್ರ್ಯಾಪ್ ಆರೋಪ
ಇದಕ್ಕೆ ಪ್ರತಿಯಾಗಿ ನಿಖಿಲ್, ಮಲ್ಲೇಶ್ವರ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ. ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆತ ಹೇಳಿದ್ದಾನೆ.
ಡಿಕ್ಸನ್ ಮೂಲಕ ಪರಿಚಯವಾದ ಯುವತಿ ಹಾಗೂ ಖಾಸಗಿ ಸುದ್ದಿವಾಹಿನಿಯ ಪ್ರತಿನಿಧಿ ಎಂದು ಹೇಳಿಕೊಂಡ ಇಮ್ರಾನ್ ಸೇರಿದಂತೆ ಕೆಲವರು ಬೆದರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಫೆಬ್ರವರಿ 14ರಂದು ವಿಲ್ಲಾದಲ್ಲಿ ಪಾರ್ಟಿ ನಡೆದಿದ್ದು, ಬಳಿಕ ಆಕೆಯನ್ನು ಸುರಕ್ಷಿತವಾಗಿ ರಾಜಾಜಿನಗರದ ವಾರಿಯರ್ ಬೇಕರಿ ಬಳಿ ಇಳಿಸಿದ್ದೆ ಎಂದು ನಿಖಿಲ್ ಹೇಳಿಕೊಂಡಿದ್ದಾನೆ.
ಸಮಗ್ರ ತನಿಖೆ
ಸದ್ಯ ಎರಡು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೊಬೈಲ್ ಕಾಲ್ ಡೀಟೇಲ್ಸ್, ಸಿಸಿಟಿವಿ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣದ ಸಂವಹನಗಳ ಪರಿಶೀಲನೆ ನಡೆಯುತ್ತಿದೆ.
ಎರಡೂ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಮಧ್ಯೆ ನಿಜಾಂಶ ಪತ್ತೆಹಚ್ಚಲು ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.










