ಹಾಸನ: ಬೀರನಹಳ್ಳಿ ಕೆರೆ ಬಳಿ ಇರುವ ಬಡವರ ನಿವೇಶನ ವಿಚಾರದಲ್ಲಿ 18 ವರ್ಷಗಳಿಂದ ಕಣ್ಣೀರಿಡುವಂತಾಗಿದ್ದು, ರಾಜಕೀಯ ದ್ವೇಷಕ್ಕೆ 75 ಮನೆಗಳ ಕುಟುಂಬಗಳು ಬೀದಿ ಪಾಲಾಗಿದೆ.
ನ್ಯಾಯಕ್ಕಾಗಿ ಆಮರಾಣಾಂತ ಉಪವಾಸ ಮಾಡಲು ತೀರ್ಮಾನಿಸಿದ್ದೇವೆ ಎಂದು ನೊಂದ ನಿವಾಸಿಗಳಾದ ಕಮಲ ಮತ್ತು ಗಂಗಾಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, 2007, ಮೇ 11 ರಂದು ನಮ್ಮ ಬದುಕಿನ ಕರಾಳ ದಿನ ಎಂದರೇ ತಪ್ಪಾಗಲಾರದು. ಬೀರನಹಳ್ಳಿ ಕೆರೆ ಅಂಗಳದ 75 ಬಡ ಕುಟುಂಬಗಳು ಕಣ್ಣೀರಿನಿಂದ ನೆನಪಿಸಿಕೊಳ್ಳುತ್ತಿವೆ.
ಅಂದು ಬೆಳಗ್ಗೆ ಪೊಲೀಸ್ ಭದ್ರತೆ ನಡುವೆ ಜೆಸಿಬಿ ಮೂಲಕ ನಮ್ಮ ಮನೆಗಳ ಸುಧಾರಣೆ ಹೆಸರಿನಲ್ಲಿ ಜಿಲ್ಲಾಡಳಿತ ನೆಲಸಮಗೊಳಿಸಿತು ಎಂದು ಅಳಲು ತೋಡಿಕೊಂಡರು.
ಇದು ನಿವಾಸಿಗಳ ಜೀವನದಲ್ಲಿ ಮಾಸದ ಗಾಯವಾಗಿದೆ. ಅಧಿಕಾರಿಗಳ ಕಠೋರ ಕ್ರಮದಿಂದ 75 ಬಡ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಅಂದಿನ ಕಣ್ಣೀರಿನ ಕೂಗು, ಆಕ್ರಂದನಕ್ಕೆ ಯಾರೂ ಕರುಣೆ ತೋರಲಿಲ್ಲ. ನಂತರ ಅಂದಿನ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಹೆಚ್.ಎಸ್. ಪ್ರಕಾಶ್ ಅವರು 66 ಫಲಾನುಭವಿಗಳನ್ನು ಆಯ್ಕೆ ಮಾಡಿ ಕೃಷ್ಣನಗರದಲ್ಲಿ ನಿವೇಶನ ನೀಡಲು ಹಕ್ಕುಪತ್ರ ವಿತರಿಸಿದ್ದರು.
ಹಕ್ಕುಪತ್ರ ಕೊಟ್ಟ ನಂತರ ಹಿಂತೆಗೆತವಾಗಿದೆ. ಹಕ್ಕುಪತ್ರ ನೀಡಿದರೂ ಕೃಷ್ಣ ನಗರದಲ್ಲಿ ಆಶ್ರಯ ಯೋಜನೆ ಅಡಿ ನಿವೇಶನ ಕೊಡಲು ಸಾಧ್ಯವಿಲ್ಲ. ಎಂದು ನಗರಾಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದೆ ಎಂದು ದೂರಿದರು.
ಬೀರನಹಳ್ಳಿ ಕೆರೆಗೆ ಮನೆಗಳನ್ನು ಕಳೆದುಕೊಂಡ ಕುಟುಂಬಗಳು 18 ವರ್ಷಗಳಿಂದ ಬೀದಿ ಬದಿಯಲ್ಲಿ, ಬಾಡಿಗೆ ಮನೆಗಳಲ್ಲಿ, ಸಂಕಷ್ಟದಲ್ಲಿ ಬದುಕುತ್ತಿವೆ. ನಿವೇಶನಕ್ಕಾಗಿ ರಾಜಕಾರಣಿಗಳ, ಅಧಿಕಾರಿಗಳ, ಕಚೇರಿಗಳ ಬಾಗಿಲು ತಟ್ಟಿದರೂ ನ್ಯಾಯ ಸಿಗಲಿಲ್ಲ. ನಮ್ಮ ಮನೆ ನೆಲಸಮ ಮಾಡಿದ ಜಾಗ ಹಾಗೆಯೇ ಇದ್ದು ಯಾವುದೇ ಅಭಿವೃದ್ಧಿ ಆಗಿಲ್ಲ. ಹಾಗಿದ್ರೆ ಯಾವ ಕಾರಣಕ್ಕೆ ತೆರವು ಮಾಡಿದರು ಎಂದು ಪ್ರಶ್ನಿಸಿದರು.
ಹಲವು ಬಾರಿ ಮನವಿ ಕೊಟ್ಟರೂ ಯಾವ ಪ್ರಯೋಜನವೂ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಕಾರ್ಯಾಲಯ, ವಸತಿ ಸಚಿವಾಲಯ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಜನಸ್ಪಂದನ ಸಭೆ, ಎಲ್ಲೆಡೆ ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲ. ಇದೀಗ ಅಂತಿಮ ಹೋರಾಟ ಆಮರಾಣಾಂತ ಉಪವಾಸ ಮಾಡಲು ನಿರ್ಧಾರ ಮಾಡಲಾಗಿದೆ. ಎಲ್ಲ 75 ಕುಟುಂಬಗಳು ಜಿಲ್ಲಾಧಿಕಾರಿ ಕಚೇರಿ ಎದುರು ಆಮರಾಣಾಂತ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿವೇಶನ ಕಳೆದುಕೊಂಡ ಗೌರಮ್ಮ, ಜಯಲಕ್ಷ್ಮಿ, ಮೀನಾಕ್ಷಿ, ಹೇಮಾ, ಪುಷ್ಪಾವತಿ ಇದ್ದರು.










