ಸಕಲೇಶಪುರ : ಜಾತಿ ಧರ್ಮದ ಸಂಬಂಧವೇ ಇಲ್ಲದೆ ಪೌತಿ ಖಾತೆಯನ್ನು ಮಾಡಿಸಿಕೊಂಡು ಅಕ್ರಮವಾಗಿ ದಲಿತರ ಭೂಮಿಯನ್ನು ಕಬಳಿಸಿರುವ ಶೇಕ್ ಅಹಮ್ಮದ್ ಎಂಬಾತನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೈಭೀಮ್ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷ ಬೆಳಗೋಡು ಬಸವರಾಜು ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನ ಬೆಳಗೋಡು ಹೋಬಳಿಯ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮದ ಸರ್ವೆ ನಂ 68 ರಲ್ಲಿ 1.20 ಎಕರೆ ಜಮೀನು ಎಲ್.ಎನ್.ಡಿ 43/82-83 ಆದೇಶದಂತೆ ಪರಿಶಿಷ್ಟ ಜಾತಿಗೆ ಮೀಸಲಾದ ಕೋಟಾದಡಿ ಸಿದ್ದಯ್ಯ ಬಿನ್ ಪುಟ್ಟಯ್ಯ ಅವರಿಗೆ ಮಂಜೂರು ಮಾಡಲಾಗಿತ್ತು. ಸಿದ್ದಯ್ಯ ಅವರು ಮೃತಪಟ್ಟ ನಂತರ ಎಂ.ಆರ್ 5/84-85 ಮೂಲಕ ಅವರ ಪತ್ನಿ ಸಿದ್ದಮ್ಮ ಅವರ ಹೆಸರಿನಲ್ಲಿ ಪೌತಿಖಾತೆ ದಾಖಲಾಗಿತ್ತು.
ಸಿದ್ದಮ್ಮ ಅವರು ಇಂದಿಗೂ ಜೀವಂತವಾಗಿರುವುದನ್ನು ಕುಟುಂಬವು ಸ್ಪಷ್ಟಪಡಿಸಿದೆ.ಈ ವೇಳೆ, ಶೇಖ್ ಮಹಮದ್ ಎಂಬವರು ಸುಳ್ಳು ಹೇಳಿಕೆ ನೀಡಿ “ಸಿದ್ದಯ್ಯ ನನ್ನ ತಂದೆ” ಎಂದು ತೋರಿಸಿ, ದಾಖಲೆಗಳನ್ನು ತಿರುಚಿ, ಸಿದ್ದಮ್ಮ ಅವರನ್ನು “ಮೃತರು” ಎಂದು ದಾಖಲಿಸಿ ಜಮೀನಿನ ಪೌತಿಖಾತೆ ಮಾಡಿಕೊಂಡಿದ್ದಾರೆ
ಇದು ಅತ್ಯಂತ ಗಂಭೀರ ಅಪರಾಧವಾಗಿದೆ.ಈ ನಕಲಿ ದಾಖಲೆ ಸೃಷ್ಟಿಯ ಪ್ರಕ್ರಿಯೆಯಲ್ಲಿ ಕೆಲವು ಗ್ರಾಮಲೆಕ್ಕಿಗರು, ರೆವಿನ್ಯೂ ಇನ್ಸ್ಪೆಕ್ಟರ್, ಉಪ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕರಿಸಿರುವುದು ಕಂಡು ಬರುತ್ತಿದೆ.
ಆರೋಪಿಗಳು ಸಾಕ್ಷಿ ನಾಶ ಮಾಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮ ವಾಗಿ ಶೇಕ್ ಮೊಹಮ್ಮದ್ ರವರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಉದಯ್ ಕುಮಾರ್ ಮಾತನಾಡಿ ಸಿದ್ದಮ್ಮನವರ ಕುಟುಂಬದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ, ಅದರ ಹೊಣೆಗಾರರು ಶೇಖ್ ಮಹಮದ್ ಹಾಗೂ ಅವರನ್ನು ಬೆಂಬಲಿಸಿದ ಅಧಿಕಾರಿಗಳೇ ಆಗಿರುತ್ತಾರೆ ಎಂದು ಎಚ್ಚರಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ತಪ್ಪಿತಸ್ಥ ವ್ಯಕ್ತಿ ಹಾಗೂ ಸಹಕಾರ ನೀಡಿದ ಅಧಿಕಾರಿಗಳ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಭ್ರಷ್ಟಾಚಾರ ಮತ್ತು ಸುಳ್ಳು ದಾಖಲೆ ಸೃಷ್ಟಿಗೆ ಯಾವುದೇ ರೀತಿಯ ಸಹನಶೀಲತೆ ತೋರಬಾರದು ತಪ್ಪು ಮಾಡಿದವರ ವಿರುದ್ದ ಯಾವುದೇ ಕಾನೂನು ಕ್ರಮ ಕೈಗೊಳ್ಳ ದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಲ್ಲಪ್ಪ, ಸಿದ್ದಮ್ಮ, ನಿಂಗರಾಜ್ ಉಪಸ್ಥಿತರಿದ್ದರು.










