ಚನ್ನರಾಯಪಟ್ಟಣ: ರೈತರ ಬೆಳೆಗಳ ಸಾಧಕ ಬಾದಕಗಳ ಕುರಿತು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸೇರಿ ಚರ್ಚಿಸಿ ಪರಿಹಾರ ಕಂಡುಹಿಡಿಯಬೇಕು ಎಂದು ಸಿಐಟಿಯು ಹಾಸನ ಜಿಲ್ಲಾ ಉಪಾಧ್ಯಕ್ಷ ಗೊಲ್ಲರಹೊಸಹಳ್ಳಿ ಮಂಜುನಾಥ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಾಲೂಕು ಹಾಗೂ ಜಿಲ್ಲೆಯಲ್ಲಿ ತೆಂಗು ಬೆಳೆ ಶೇಕಡ 60ರಷ್ಟು ಹಾನಿಯಾಗಿದೆ. ನುಸಿರೋಗ ಕಾಂಡಕೋರಕ ರಸ ಸೋರುವಿಕೆ, ಕಪ್ಪುಳುವಿನ ಬಾದೆ, ಬಿಳಿ ನೋಣದ ಕಾಟ ಈ ರೀತಿ ಕೀಟಬಾಧೆ ರೋಗಭಾದೆಯಿಂದ ಬೆಳೆಕುಸಿತವಾಗಿದೆ.
ಕೆಲವೊಮ್ಮೆ ಬೆಲೆಕುಸಿತವಾದರೆ ಇತ್ತೀಚಿಗೆ ಬೆಳೆಗೆ ಕುಸಿತವಾಗಿದೆ ಒಟ್ಟಾರೆ ರೈತನಿಗೆ ಸಂಕಷ್ಟ ಸದಾ ಕಾಡುತ್ತಿದೆ. ಸರ್ಕಾರದ ಕೃಷಿ ನೀತಿಗಳು ಸಮರ್ಪಕವಾಗಿಲ್ಲದೆ ಇರುವುದರಿಂದ ಕೆಲವು ಇಲಾಖೆಗಳು ನಿಷ್ಕ್ರಿಯವಾಗಿವೆ. ರೈತರಿಗೆ ಮಾಹಿತಿ ನೀಡುವುದರ ಬದಲು ತಮ್ಮ ಇಲಾಖೆಯಲ್ಲಿ ಹಣ ಮಾಡುವ ನೀಚ ಬುದ್ಧಿಗೆ ಅಧಿಕಾರಿಗಳು ಇಳಿಯುತ್ತಿದ್ದಾರೆ.
ರೈತರು ಮಾಹಿತಿ ಕೊರತೆಯಿಂದ ಪರಿಹಾರ ಕಂಡುಹಿಡಿದುಕಳ್ಳುವುದರ ಬದಲು ದೇವರ ಮರೆಹೋಗುತ್ತಿದ್ದಾನೆ. 16ನೇ ಸಿಐಟಿಯು ರಾಜ್ಯ ಸಮ್ಮೇಳನದ ಅಂಗವಾಗಿ ತೆಂಗು ಬಳಗಾರರ ಸಮಸ್ಯೆಗಳು ಮತ್ತು ಪರಿಹಾರ ಕುರಿತು ವಿಚಾರ ಸಂಕಿರಣವನ್ನು ಇದೇ ತಿಂಗಳು 15ನೇ ತಾರೀಕು ಬುಧವಾರ ಹತ್ತು ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ತೊಟಗಾರಿಕಾ ಉಪ ನಿರ್ದೇಶಕ ಎಚ್ .ಆರ್. ಯೋಗೇಶ್ ನೆರವೇರಿಸಲಿದ್ದು ರಾಜ್ಯ ಕಾರ್ಯದರ್ಶಿ ಬೆಲೆ ಕಾವಲು ಸಮಿತಿ ಶ್ರೀಕಾಂತ್ ಕೆಲಹಟ್ಟಿ ಅವರು ಉಂಡೆ ಕೊಬ್ಬರಿ ವೈಜ್ಞಾನಿಕ ಬೆಲೆ ಮಾರುಕಟ್ಟೆ ಸಮಸ್ಯೆಗಳು ಮತ್ತು ಪರಿಹಾರ ಕುರಿತು ವಿಷಯ ಮಂಡಿಸಲಿದ್ದಾರೆ.
ಎರಡನೇ ವಿಷಯ ಮಂಡನೆಯನ್ನು ತೆಂಗು ಬೆಳೆಗಾರರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಮಚಂದ್ರು ವಳ್ಗೆರೆಹಳ್ಳಿ ತಾಲೂಕಿನ ತೆಂಗು ಬೆಳೆಗಾರರ ಸಮಸ್ಯೆ ಕುರಿತು ತಿಳಿಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ನಿವೃತ್ತ ಡಿಜೆ ಎಂ ಕೆ ಓ ಎಸ್ ಚೇತನ್ಯಾಕುಮಾರಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಜಿಲ್ಲಾಧ್ಯಕ್ಷ ಎಚ್. ಆರ್. ನವೀನ್ ಕುಮಾರ್, ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ಹಾಸನ ಜಿಲ್ಲಾ ಉಪಾಧ್ಯಕ್ಷ ಎಚ್. ಎಸ್. ಮಂಜುನಾಥ್ ವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬರಗೂರು ಸಿ.ಆರ್. ಶಂಕರಣ್ಣ, ಪ್ರಧಾನ ಕಾರ್ಯದರ್ಶಿ ಜಯಚಂದ್ರ ಜಿನೇನಹಳ್ಳಿ ಖಜಾಂಚಿ ತೇಜಸ್ಗೌಡ ಗೋವಿನಕರೆ, ಜೋಗಿಪುರ ಮಂಜು, ಮಹೇಶ್ ಉಪಸ್ಥಿತರಿದ್ದರು.










