ಹಾಸನ: ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಡೀಮ್ಡ್ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯ ಉದ್ದೇಶ ಹೊರತು ಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ತನಿಖೆ ನಡೆಸಲು ಎಸ್ಐಟಿ ರಚಿಸುವಂತೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕೆಂದು ಆಗ್ರಹಿಸಿದರು. ಹಾಸನ ಜಿಲ್ಲೆಯಲ್ಲಿ 2,11,763 ಎಕರೆ ಅರಣ್ಯ ಭೂಮಿ ಇದ್ದು, ಇದರಲ್ಲಿ ಶೇ.15ರಷ್ಟು ಭೂಮಿ ಖಾಸಗಿ ಅವರಿಗೆ ಮಂಜೂರು ಮಾಡಲಾಗಿದೆ. ನೂರಾರು ಜನರು ಈ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು, ವ್ಯವಸಾಯ ಮಾಡಿಕೊಂಡು ಜೀವನ ನಿರ್ವಹಣೆಮಾಡುತ್ತಿದ್ದಾರೆ. ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ನಾಲ್ಕು ತಿಂಗಳ ಒಳಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎಸ್ಐಟಿ ತಂಡ ರಚಿಸಿ ಅರಣ್ಯ ಭೂಮಿ ಗುರುತಿಸಿ ವಶಕ್ಕೆ ಪಡೆಯಬೇಕು ಅಥವಾ ದರ ನಿಗದಿ ಪಡಿಸಿ ಆ ಹಣವನ್ನು ಅರಣ್ಯೀಕರಣಕ್ಕೆ ಬಳಕೆ ಮಾಡಿಕೊಳ್ಳಬೇಕೆಂದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಬಗ್ಗೆ ಮರುಪರಿಶೀಲನೆ ಯಾಗಬೇಕೆಂದು ಹೇಳಿದರು.
ಐದಳ್ಳ ಕಾವಲು, ಸೊಪ್ಪಿನಳ್ಳಿ, ನಿಟ್ಟೂರು, ನೀಲಗಿರಿ ಕಾವಲು ವ್ಯಾಪ್ತಿಯಲ್ಲಿ ನಾನು ಸಚಿವನಾಗಿದ್ದ ಸಮಯದಲ್ಲಿ ಕಂದಾಯ ದಾಖಲೆಯಿಂದ ಅಧಿಕೃತವಾಗಿ ದಾಖಲೆ ನಿರ್ಮಿಸಿ ಜಾಗ ಮಂಜೂರು ಮಾಡಿ ಸರ್ಕಾರದ ಆದೇಶದಂತೆ ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ತೀರ್ಪಿನ ಬಗ್ಗೆ ಮರು ಪರಿಶೀಲನೆಯಾಗಬೇಕೆಂದರು.
ಈಗ ಅರಣ್ಯ ಒತ್ತುವರಿಯಾಗಿದೆ ಎಂಬ ಕಾರಣಕ್ಕೆ ಭೂಮಿಯನ್ನು ವಶಕ್ಕೆ ಪಡೆಯಬಾರದು.ಜನರು ನೂರಾರು ವರ್ಷದಿಂದ ಸಾಗುವಳಿಮಾಡಿಕೊಂಡು ಬಂದಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಸಚಿವರು, ಶಾಸಕರು ಗಮನಹರಿಸಬೇಕೆಂದರು.ಅರಣ್ಯ ಪ್ರದೇಶ ಒತ್ತುವರಿ ಗುರುತಿಸಿ ವಶಕ್ಕೆ ಪಡೆದರೆ ಜಿಲ್ಲೆಯಲ್ಲಿ 25 ಸಾವಿರ ಕುಟುಂಬ ಬೀದಿಗೆ ಬರಲಿವೆ.
ಸುಪ್ರೀಂ ಕೋರ್ಟ್ ಅಂತಿಮ ತೀರ್ಮಾಣನ ನೀಡಿ ಜನಸಾಮಾನ್ಯರಿಗೆ ನ್ಯಾಯಕೊಡಿಸುವ ಮೂಲಕ ತಾರ್ಕಿಕ ಅಂತ್ಯ ಹೇಳಬೇಕು. ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸದಿದ್ದಲ್ಲಿ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದರು.










