ಹಾಸನ: ಜಿಲ್ಲೆಯಲ್ಲೇ ಅತಿ ಹೆಚ್ಚು ಸೈನಿಕರನ್ನು ದೇಶಕ್ಕೆ ನೀಡಿರುವ ಹಾಸನ ತಾಲ್ಲೂಕಿನ ಮೆಳಗೋಡು ಗ್ರಾಮದಲಿ ಎನ್ಎಸ್ಎಸ್ ಶಿಬಿರ ಆಯೋಜನೆ ಮಾಡಿರುವುದು ಸಂತಸದ ವಿಷಯ ಎಂದು ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಕರೀಗೌಡ ತಿಳಿಸಿದ್ದಾರೆ.
ಹಾಸನ ತಾಲ್ಲೂಕಿನ ಮೆಳಗೋಡು ಗ್ರಾಮದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಭಾಗವಹಿಸಿ,ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೇ ವೀರಯೋಧರುಗಳ ಗ್ರಾಮ ಎಂದು ಹೆಸರಾಗಿರುವ ಹಾಸನ ತಾಲ್ಲೂಕಿನ ಮೆಳಗೋಡು ಗ್ರಾಮದಲ್ಲಿ ಎನ್ ಎಸ್ ಎಸ್ ಶಿಬಿರ ಆಯೋಜನೆ ಮಾಡಿರುವುದು ನಮಗೆ ಸಂತಸದ ವಿಷಯ, ನಮ್ಮ ಗ್ರಾಮದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಯೋಧರು ದೇಶ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಸೈನಿಕರಿದ್ದು ನಮ್ಮ ಒಂದು ಗ್ರಾಮದಲ್ಲಿಯೇ ಸುಮಾರು 60ಕ್ಕೂ ಹೆಚ್ಚು ಸೈನಿಕರು ದೇಶ ಸೇವೆ ಮಾಡುತ್ತಿದ್ದಾರೆ, ಇದು ಜಿಲ್ಲೆಯಲ್ಲೇ ಅತಿ ಹೆಚ್ಚು ಸೈನಿಕರನ್ನು ದೇಶಕ್ಕೆ ನೀಡಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.ನಮ್ಮ ದೇಶ ಉಳಿಯಬೇಕೆಂದರೆ ಮನೆಗೊಬ್ಬರಂತೆ ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದ ಅವರು, ಎನ್ಎಸ್ಎಸ್ ಶಿಬಿರಾರ್ಥಿಗಳು ಸಹ ತಾವು ಹೋದಲೆಲ್ಲಾ ದೇಶ ಸೇವೆ ಮಾಡಲು ಯುವಕರನ್ನು ಪ್ರೇರೇಪಿಸುವಂತೆ ತಿಳಿಸಿದರು.
ನಂತರ ಮಾತನಾಡಿದ ಶಿಬಿರದ ಕಾರ್ಯಕ್ರಮಾಧಿಕಾರಿ ಸುಬ್ರಾಯ ಪ್ರಭು,ಸೈನಿಕರ ಗ್ರಾಮವಾದ ಈ ಪುಣ್ಯ ಭೂಮಿಯಲ್ಲಿ ಎನ್ಎಸ್ಎಸ್ ಶಿಬಿರ ಆಯೋಜನೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ, ನಮ್ಮ ಶಿಬಿರಾರ್ಥಿಗಳಿಗೆ ಗ್ರಾಮಸ್ಥರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಮೆಳಗೋಡು ಗ್ರಾಮದ ನಿವೃತ್ತ ಯೋಧರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










