ಹಾಸನ:ನಗರದ ಶ್ರೀ ಗಣಪತಿ ಸೇವಾ ಸಂಸ್ಥೆ ವತಿಯಿಂದ ನಗರ ಬಸ್ ನಿಲ್ದಾಣ ಸಮೀಪ ಪ್ರತಿಷ್ಠಾಪಿಸಿದ್ದ75ನೇ ವರ್ಷದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಶ್ರೇಯಸ್ ಪಟೇಲ್ ಭಾಗಿಯಾಗಿದ್ದರು.
ಕಳೆದ ಏಳೂವರೆ ದಶಕಗಳಿಂದ ಶ್ರೀ ಗಣಪತಿ ಸೇವಾ ಸಮಿತಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಂಸದರು, ಗಣೇಶ ಚತುರ್ಥಿ ಆರಂಭ ದಿನದಿಂದ ವಿಸರ್ಜನೆ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಮಿತಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಪರಸ್ಪರ ಸ್ನೇಹ, ಏಕತೆ, ಸಾಮರಸ್ಯ, ಭ್ರಾತೃತ್ವದ ಸಂಕೇತವಾದ ಶ್ರೀ ಗಣೇಶ ಎಲ್ಲರಿಗೂ ಒಳಿತು ಮಾಡಲಿ, ಶ್ರೀ ಗಣೇಶನ ಆಶೀರ್ವಾದದಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.
ಇದಾದ ಬಳಿಕ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲೂ ಶ್ರೇಯಸ್ ಪಟೇಲ್ ಅವರು ಭಾಗವಹಿಸಿದ್ದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಕ್ರೀಡೆಗಳು ನಮ್ಮನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ, ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ವ್ಯಕ್ತಿ ಕ್ರಿಯಾಶೀಲವಾಗಿರಬೇಕೆಂದರೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.










