ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಣೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿ ಆರೋಗ್ಯದ ಅರಿವು ಮೂಡಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಹೆಚ್.ಪಿ. ಮೋಹನ್ ಹೇಳಿದರು.
ತಾಲ್ಲೂಕಿನ ಹಿರೀಸಾವೆ ಗ್ರಾಮದ ಶ್ರೀ ಸಮುದಾಯ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ತಾಲ್ಲೂಕು ಘಟಕ, ಮೈಸೂರಿನ ನಾರಾಯಣ ಆಸ್ಪತ್ರೆ, ವಿ–ಸೆಕ್ಯೂರ್ ಕ್ವಿಕ್ ಇನ್ಷೂರೆನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ಕಾನೂನು ಅರಿವು ಶಿಬಿರದಲ್ಲಿ ಆವರು ಮಾತನಾಡಿ, ಜನರು ದಿನ ನಿತ್ಯದ ಕೆಲಸ ಕಾರ್ಯಗಳ ಒತ್ತಡದಿಂದ, ಆರೋಗ್ಯವನ್ನು ನಿರ್ಲಕ್ಷ ಮಾಡುತ್ತಿರುವುದರಿಂದ, ಯಾವ ಕ್ಷಣದಲ್ಲಿ ಬೇಕಾದರೂ ಆನಾರೋಗ್ಯರಾಗಬಹುದು ಎಂದರು.
ತಾಲ್ಲೂಕು ಘಟಕದ ಸಭಾಪತಿ ಭರತ್ ಕುಮಾರ್ ಮಾತನಾಡಿ, ಒಬ್ಬರ ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಯುತ್ತದೆ ಎಂದರು. ಹಿರೀಸಾವೆ ಆರಕ್ಷಕ ವೃತ್ತ ನಿರೀಕ್ಷಕ ಎಸ್. ಸಂತೋಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚನ್ನರಾಯಪಟ್ಟಣ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯುವರಾಜ್, ಹಿರೀಸಾವೆ ಆಸ್ಪತ್ರೆಯ ಡಾ. ಶಿವಸ್ವಾಮಿ ಆರೋಗ್ಯ ಮತ್ತು ರಕ್ತದ ದಾನದ ಮಹತ್ವದ ಬಗ್ಗೆ ಮಾತನಾಡಿದರು. ಶಿಬಿರದಲ್ಲಿ ನೊಂದಾಯಿಸಿಕೊಂಡಿದ್ದ 25 ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ವಾಹನ ವಿಮೆಯನ್ನು ಮಾಡಿಕೊಡಲಾಯಿತು ಎಂದು ವಿ.ಸೆಕ್ಯೂರ್ ಇನ್ಸೂರೆನ್ಸ್ ಸಂಸ್ಥೆಯ ಅಧಿಕಾರಿ ಎಸ್. ಮಹದೇವ್ ತಿಳಿಸಿದರು.
ಚಲನಚಿತ್ರ ನಟಿ ಶುಭರಕ್ಷಾ, ಐಡಿಎಫ್ ಬ್ಯಾಂಕ್ ಅಧಿಕಾರಿ ಆಶಾ ಕುಮಾರಿ ಮಾತನಾಡಿದರು. ಶಿಬಿರದಲ್ಲಿ 97 ಮಂದಿ ರಕ್ತದಾನ ಮಾಡಿದರೆ 350ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಜಯೇಂದ್ರಕುಮಾರ್, ಉದಯಕುಮಾರ್, ತಾಲ್ಲೂಕ ಘಟಕದ ಕಿಶೋರ್ ಕುಮಾರ್, ಜಬೀವುಲ್ಲಾ ಬೇಗ್, ಜಾಗರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ, ಸಮುದಾಯ ಭವನದ ಮಾಲೀಕ ಬಾಲಕೃಷ್ಣ ಮತ್ತಿತರರು ಇದ್ದರು.










