ಬೆಂಗಳೂರು:ಅಭಿಮಾನ್ ಸ್ಟುಡಿಯೋವನ್ನು ಅರಣ್ಯ ಪ್ರದೇಶವೆಂದು ಘೋಷಿಸಿ ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಸರಿಯಾದ ಹೆಜ್ಜೆಯಾಗಿದೆ ಎಂದು ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದರು.
ಈ ಕುರಿತು ಅವರು ಇಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಸರ್ಕಾರವು ಈ ಬಾರಿ ಯಾವುದೇ ರೀತಿಯ ತಪ್ಪು ವಾದ ಮಂಡನೆಗೆ ಅವಕಾಶ ಕೊಡಬಾರದೆಂದು ಎಚ್ಚರಿಸಿದರು. ಈ ಹಿಂದೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದರೂ ಸರಿಯಾದ ವಾದ ಮಂಡನೆ ಇಲ್ಲದ ಕಾರಣ ಮಾಲೀಕರು ತಡೆಯಾಜ್ಞೆ ಪಡೆದು ಸ್ಟುಡಿಯೋವನ್ನು ಖಾಸಗಿ ಸ್ವತ್ತು ಎಂದು ಬಿಂಬಿಸಿ ಅವ್ಯವಹಾರ ನಡೆಸುತ್ತಿದ್ದರೆಂದು ಅವರು ಸ್ಮರಿಸಿದರು.
ಸಭೆಯ ವೇಳೆ ಬಾಲಕೃಷ್ಣ ಅವರ ಮಕ್ಕಳು ಮತ್ತೆ ತಡೆಯಾಜ್ಞೆ ತರಲು ಉದ್ದೇಶಿಸಿರುವುದರಿಂದ ಕೂಡಲೆ ಕೆವಿಎಟ್ (Caveat) ದಾಖಲಿಸಬೇಕೆಂದು ಶ್ರೀನಿವಾಸ್ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ, ಅರಣ್ಯ ಪ್ರದೇಶವೆಂದು ಘೋಷಿಸಿದ ಬಳಿಕವೂ ಅಲ್ಲಿರುವ ಡಾ. ವಿಷ್ಣುವರ್ಧನ್ ಮತ್ತು ಬಾಲಕೃಷ್ಣ ಅವರ ಸ್ಮಾರಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಕೂಡ ಅವರು ವಿನಂತಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಮನವಿಗೆ ಸ್ಪಂದಿಸಿ, ಅಭಿಮಾನ ಸ್ಟುಡಿಯೋವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಂಡು ಅಲ್ಲಿ ಜೈವಿಕ ಶ್ವಾಸಕೋಶ ಉದ್ಯಾನವನವನ್ನು ನಿರ್ಮಿಸುವುದರ ಜೊತೆಗೆ ವಿಷ್ಣುವರ್ಧನ್ ಸಮಾಧಿಗೆ ಸ್ಥಳ ಮೀಸಲಿಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಭೆಯಲ್ಲಿ ವಿಷ್ಣುಸೇನಾ ಸಮಿತಿಯ ಪದಾಧಿಕಾರಿಗಳಾದ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.










