ಬೆಂಗಳೂರು: ಚಿತ್ರನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವಿಗೀಡಾಗಿದ್ದು, ಆಕೆಯ ಪತಿ ಗಾಯಗೊಂಡಿದ್ದಾರೆ. ರಾತ್ರಿಯಲ್ಲಿ ಈ ಅಪಘಾತವಾಗಿದ್ದರಿಂದ ನಟ ನಾಗಭೂಷಣ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರಾ ಎಂಬ ಪ್ರಶ್ನೆಯೊಂದೂ ಮೂಡಿದೆ.
ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಅಪಘಾತವಾಗಿತ್ತು. ಪಾದಚಾರಿಗಳಾದ ಕೃಷ್ಣ ಮತ್ತು ಪ್ರೇಮಾ ಎಂಬವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಪ್ರೇಮಾ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅವರ ಪತಿ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರು.
ಈ ಕುರಿತಂತೆ ಡಿಸಿಪಿ (ಸಂಚಾರ-ದಕ್ಷಿಣ) ಶಿವಪ್ರಕಾಶ್ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಚಾಲಕ ವಾಹನ ಓಡಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಪ್ರೇಮಾ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕೃಷ್ಣರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ, ಚಿತ್ರನಟ ನಾಗಭೂಷಣ್ ಅವರನ್ನು ಬಂಧಿಸಿ, ಸ್ಟೇಷನ್ ಬೇಲ್ ನೀಡಿ ಕಳುಹಿಸಲಾಗಿದೆ.







