ಹಾಸನ: ಆಲೂರು ತಾಲ್ಲೂಕು ಹೊಸಮಠ ಗ್ರಾಮದ ಸನಂ 151ರ ಹೊಸಮಠ ಗ್ರಾಮದಲ್ಲಿ ಕ್ರೈಸ್ತರ ಪವಿತ್ರಸ್ಥಳ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು,ಕ್ರೈಸ್ತ ಧರ್ಮಗುರುಗಳು ಹಾಗೂ ರೈತಸಂಘದವರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು, ಎಲ್ಲರೂ ಕೆಲಹೊತ್ತು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಜಯ ಬಸವಾನಂದ ಮಹಾಸ್ವಾಮೀಜಿ, ಗಣಿಗಾರಿಕೆ ಸ್ಫೋಟದಿಂದ ಸುತ್ತಮುತ್ತಲ ಮನೆಗಳಲ್ಲಿ ಬಿರುಗು ಕಾಣಿಸಿಕೊಂಡಿದೆ ಎಂದು ದೂರಿದರು.
ಹಾಗೆಯೇ ಭಾರೀ ವಾಹನ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಶಾಲಾ ಬಸ್ಗಳು ಹಾಳಾದ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿದೆ ಎಂದರು.
ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಧೂಳು ಹೊಲಗಳಿಗೆ ಹರಿದು ಕಾಫಿ, ಮೆಣಸು, ಭತ್ತದ ಬೆಳೆ ಹಾನಿಯಾಗುತ್ತಿದೆ. ಹೊಸಮಠ, ಕಲ್ಲು ಕೊಪ್ಪಲು, ಮಠದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು, ದಿಣ್ಣೆಕೊಪ್ಪಲು ಮುಂತಾದ ಹಳ್ಳಿಗಳ ಜನತೆ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದಾರೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿತ್ತು, ಗ್ರಾಮದಲ್ಲಿ ಲಿಂಗಾಯಿತರು, ಸುತ್ತಮುತ್ತ ಕ್ರೈಸ್ತ ಜನಾಂಗದವರು ಇದ್ದೇವೆ. ಶಿಲುಬೆ ಬೆಟ್ಟ ಕೈಸ್ತರ ಧಾರ್ಮಿಕ ಕೇಂದ್ರವಾಗಿದ್ದು, ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ಮಾಡುವುದರಿಂದ, ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುವುದರಿಂದ ಮನೆಗಳು ಬಿರುಕು ಬಿಟ್ಟು ವಾಸ ಮಾಡಲು ಹಾಗೂ ವ್ಯವಸಾಯ ಮಾಡಲೂ ಸಹ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.
ಇದು ಕಾಡಾನೆ ಸಂಚರಿಸುವ ಜಾಗವಾಗಿದೆ. ಜಮೀನಿಗೆ ಗಣಿಗಾರಿಕೆಯ ಕಲುಷಿತ ನೀರು ನುಗ್ಗುತ್ತಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ ಕೆಲವರು ಪ್ರಕರಣವನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಭೋವಿ ಸಮಾಜದವರೂ ಕನ್ನಡ ಬಂಧುಗಳು, ಬೋವಿ ಸಮುದಾಯದ ಜಾತಿ ನಿಂದನೆ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್.ಪಿ ಕೆಚೇರಿಗೆ ದೂರು ನೀಡಿರುವುದು ಸೂಕ್ತ ಅಲ್ಲ ಎಂದರು. ಹಾಗೆಯೇ ಹೋರಾಟಗಾರರ ವಿರುದ್ಧ ಸಲ್ಲಿಸಿರುವ ದೂರನ್ನು ವಾಪಸ್ ಪಡೆಯಬೇಕೆಂಬುದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಗ್ಗೆ ಚರ್ಚ್ ಧರ್ಮಗುರು ಫಾದರ್ ಪ್ರಶಾಂತ್, ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಗಿರೀಶ್, ತಾಲೂಕು ಅಧ್ಯಕ್ಷ ಹೆಚ್.ಕೆ. ದಿನೇಶ್, ಉಪಾಧ್ಯಕ್ಷ ವೆಂಕಟೇಶ್ಗೌಡ, ಅರುಣ್ ಭಾಸ್ಕರ್, ಅಶೋಕ್, ಪುನೀತ್, ಜ್ಯೋತಿ, ಪುಷ್ಪ ಮೊದಲಾದವರಿದ್ದರು.










