ಹಾಸನ: ಇದೇ ಮೊದಲ ಬಾರಿಗೆ ನಮ್ಮ ದೇಶೀಯ
ತಳಿಯಾದ ಮಲೆನಾಡು ಗಿಡ್ಡ ತಳಿಯ ಜೋರಿ ಹೋರಿಗಳ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ತಳಿಯ ಸಂರಕ್ಷಕ ಗೂಳಿ ಶರತ್ಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲೆನಾಡು ಗಿಡ್ಡ ತಳಿಯ ಸಂರಕ್ಷಣಾ ಉದ್ದೇಶದಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಡಿ.7 ರಂದು ಭಾನುವಾರ ಚನ್ನರಾಯಪಟ್ಟಣ ತಾಲೂಕು ಸೋರೆಕಾಯಿಪುರದ ಮಲ್ಲಿಗಮ್ಮ ದೇವಸ್ಥಾನ (ಗೋಶಾಲೆ) ಆವರಣದಲ್ಲಿ ಹಬ್ಬ ನಡೆಯಲಿದೆ ಎಂದರು.
ನಮ್ಮ ದೇಶೀಯ ತಳಿಯನ್ನು ಉಳಿಸಿ, ಅಭಿವೃದ್ಧಿ ಪಡಿಸಬೇಕು ಎಂಬ ಆಶಯದಿಂದ ಉಚಿತವಾಗಿ 50 ಜೋಡಿ ಗಿಡ್ಡಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದರು.
ವಿಶ್ವ ಒಕ್ಕಲಿಗರ ಮಠದ ಶ್ರೀ ಡಾ.ನಿಶ್ಚಲಾನಂದ ಸ್ವಾಮೀಜಿ, ಸ್ಥಳೀಯ ಶಾಸಕರಾದ ಸಿ.ಎನ್.ಬಾಲಕೃಷ್ಣ ಭಾಗಿಯಾಗುವರು. ರಾಧಾ ಸುರಭಿ ಗೋ ಮಂದಿರದ ಅಧ್ಯಕ್ಷರಾದ ಭಕ್ತಿ ಭೂಷಣ್ ದಾಸ್ ಉದ್ಘಾಟನೆ ನೆರವೇರಿಸುವರು.
ಹಳ್ಳಿಕಾರ್ ತಳಿಯಂತೆಯೇ ಮಲೆನಾಡು ಗಿಡ್ಡಗಳಲ್ಲೂ ಬೇಸಾಯ ಮಾಡಬಹುದು. ಅದರ ಉಪಯೋಗ ತಿಳಿಸುವುದೂ ನಮ್ಮ ಉದ್ದೇಶ ಎಂದರು.
ಸುದ್ದಿಗೋಷ್ಟಿಯಲ್ಲಿ ಶ್ರೀರಾಮ ಸೇನೆಯ ಪದಾಧಿಕಾರಿಗಳಾದ ಹೇಮಂತ್ ಜಾನಕೆರೆ, ದರ್ಶನ್, ಸಿದ್ಧಾರ್ಥ, ಸುಬ್ರಹ್ಮಣ್ಯ ಇದ್ದರು.










