ಸಕಲೇಶಪುರ: ವರಮಹಾಲಕ್ಷ್ಮೀ ಹಬ್ಬದಂದೆ ತಾಲೂಕಿನ ಯಸಳೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಯಸಳೂರು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತುವರಿ ತೆರವು ಮಾಡಿದ್ದು ಇದು ಮಲೆನಾಡಿಗರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಸಹಾಯಕ ಅರಣ್ಯಾಧಿಕಾರಿ ಮಧು ಸೂದನ್ ಮಾರ್ಗದರ್ಶನದಲ್ಲಿ ಯಸಳೂರು ವಲಯ ಅರಣ್ಯಾಧಿಕಾರಿ ಎಸ್.ಆರ್.ಕೃಷ್ಣ ನೇತೃತ್ವದಲ್ಲಿ ತಾಲೂಕಿನ ಯಸಳೂರು ಹೋಬಳಿಯ ಕೊತ್ತನಹಳ್ಳಿ ಅಕೇಷಿಯಾ ನೆಡುತೋಪಿನಲ್ಲಿ ಎಡಕೇರಿ ಗ್ರಾಮದ ವೈ.ಟಿ.ಪಾರ್ವತಮ್ಮ ಮತ್ತು ವೈ.ಎಂ. ನಾಗರಾಜು ಎಂಬುವರು ಸುಮಾರು ೩೦ ಎಕರೆ ಅರಣ್ಯ ಪ್ರದೇಶದಲ್ಲಿ ೧೨ ಎಕರೆಗೂ ಹೆಚ್ಚು ಜಾಗದಲ್ಲಿ ಬೇಲಿ ಮಾಡಿ ಒತ್ತುವರಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಯಸಳೂರು ವಲಯ ಅರಣ್ಯಾಧಿಕಾರಿ ಕೃಷ್ಣರವರು ಮರಡಿಕೆರೆ ಗ್ರಾಮದ ಸರ್ವೆ ನಂ ೩೬೧/೧ರಲ್ಲಿ ಪ್ರಿಯಾ ಎಂಬ ದಲಿತ ಮಹಿಳೆ ಅರಣ್ಯ ಪ್ರದೇಶದಲ್ಲಿ ಮನೆಯನ್ನು ಕಟ್ಟಿದ್ದಾರೆ ಎಂಬ ಆರೋಪದ ಮೇಲೆ ಮನೆಯನ್ನು ತೆರವುಗೊಳಿಸಿದ್ದರು.










