ಹಾಸನ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಉಪಟಳ ಹೆಚ್ಚಾಗಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಹಾಸನ ಮಾತ್ರವಲ್ಲದೆ ದೇಶಾದ್ಯಂತ ಬೀದಿಬದಿ ನಾಯಿಗಳ ಹಾವಳಿ ಕುರಿತು ಚರ್ಚೆಯಾಗುತ್ತಿದ್ದು ಸುಪ್ರೀಂ ಕೋರ್ಟ್ ಸಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ವಿಧಾನಸೌಧದಲ್ಲೂ ಈ ಪ್ರತಿಧ್ವನಿಸಿದೆ. ಅದೇ ಹಿನ್ನಲೆಯಲ್ಲಿ ನಗರದಲ್ಲಿ ಹೆಚ್ಚಿರುವ ನಾಯಿಗಳ ಹಾವಳಿಯಿಂದ ಜನರನ್ನು ರಕ್ಷಿಸಬೇಕೆಂಬ ಕೂಗು ಹೆಚ್ಚಾಗಿದೆ.
ನಗರ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ. ಎಲ್ಲವನ್ನೂ ಸೆರೆ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ನೀಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ. ಬೆಂಗಳೂರಿನ ಎಬಿಸಿ ಡಾಗ್ ಕೇರ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿದ್ದು ನಗರ ಹೊರವಲಯದಲ್ಲಿ ಸುಮಾರು 8 ಶೆಡ್ಗಳನ್ನು ನಿರ್ಮಿಸಲಾಗಿದೆ. ಆ. 21 ರಿಂದ ಸೆರೆ ಕಾರ್ಯಾಚರಣೆ ನಡೆಯಲಿದೆ. ವರ್ಷಪೂರ್ತಿ ಈ ಕಾರ್ಯಕ್ರಮ ನಡೆಯಲಿದ್ದು ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪುವ ನಿರೀಕ್ಷೆ ಹೆಚ್ಚಿದೆ.
ಬೀದಿ ನಾಯಿಗಳಿಂದ ಆಗುತ್ತಿರುವ ತೊಂದರೆ ಕುರಿತು ನಿತ್ಯ ಸಾರ್ವಜನಿಕರಿಂದ ದೂರು ಕೇಳಿಬರುತ್ತಿವೆ. ಅನೇಕ ಜನರು ಕಚೇರಿಗೆ ಬಂದು ಮನವಿ ಸಲ್ಲಿಸುತ್ತಾರೆ. ಪಾಲಿಕೆ ಸದಸ್ಯರು ಸಹ ಸಾಮಾನ್ಯ ಸಭೆಗಳಲ್ಲಿ ಧ್ವನಿ ಎತ್ತಿದ್ದಾರೆ. ಹೀಗಾಗಿ ಬೀದಿ ನಾಯಿಗಳ ಸೆರೆ ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಟೆಂಡರ್ ಆಹ್ವಾನಿಸಲಾಗಿತ್ತು. ಬೆಂಗಳೂರಿನ ಕಂಪನಿ ಒಡಂಬಡಿಕೆ ಮಾಡಿಕೊಂಡಿದ್ದು ಕಾರ್ಯಾಚರಣೆ ಪ್ರಾರಂಭವಾಗಲಿದೆ. ಕಳೆದ ಐದು ತಿಂಗಳ ಹಿಂದೆಯೂ ಕೈಗಾರಿಕಾ ಪ್ರದೇಶದಲ್ಲಿ ಶೆಡ್ ನಿರ್ಮಿಸಿ ಒಂದು ವಾರಗಳ ಕಾಲ ಸೆರೆ ಕಾರ್ಯಾಚರಣೆ ನಡೆದಿತ್ತು.
ಅರ್ಧಕ್ಕೆ ನಿಂತಿದ್ದ ಕಾರ್ಯಾಚರಣೆ:
ಯೋಗಾನಂದ ಅವರು ನಗರಸಭೆ ಆಯುಕ್ತರಾಗಿದ್ದ ವೇಳೆ ಬೀದಿ ನಾಯಿಗಳ ಸೆರೆಗೆ ಕ್ರಮ ವಹಿಸಿದ್ದರು. ಆದರೆ ತುಮಕೂರು ಮೂಲದ ಕಂಪನಿ ಅರ್ಧದಲ್ಲೇ ಕೆಲಸ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಹಾಗೆಯೇ ಉಳಿದಿದೆ. ಸಾರ್ವಜನಿಕರ ಬವಣೆ ಹೇಳತೀರದಾಗಿದೆ.










