ಶ್ರವಣಬೆಳಗೊಳ: ಶ್ರೀ ಮಠದ ಪರಮಪೂಜ್ಯ ಸ್ವಸ್ತಿಶ್ರೀ
ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರು ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗಿ ಎಂದು ಹಾರೈಸಿದರು.
ದೇವರ ಪ್ರಸಾದ, ಶ್ರೀಮಠದ ಫಲ ತಾಂಬೂಲ, ಪುಷ್ಪಮಾಲೆಯೊಂದಿಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿದ ಅಭಿನವ ಚಾರುಶ್ರೀಗಳು, ಹೆಚ್ಡಿಡಿ ಅವರ ಹಣೆ ಹಾಗೂ ತಲೆಗೆ ತಾವೇ ಗಂಧೋದಕ ಹಚ್ಚಿ ಆದಷ್ಟು ಬೇಗ ಮೊದಲಿನಂತಾಗಿ ಎಂದು ಹರಸಿದರು.
ಈ ವೇಳೆ ದೇವೇಗೌಡರಿಗೆ ದೇವರ ಪ್ರಸಾದ ನೀಡಿ, ಅವರ ತಲೆಯ ಮೇಲೆ ಹೂ ಇಟ್ಟು, ನಿಮ್ಮ ಆಯಸ್ಸು ಮತ್ತಷ್ಟು ವೃದ್ಧಿಯಾಗಲಿ, ನಿಮ್ಮಿಂದ ಜಿಲ್ಲೆ, ನಾಡು, ದೇಶಕ್ಕೆ ಇನ್ನಷ್ಟು ಅಮೂಲ್ಯ ಸೇವೆ ದೊರಕುವಂತಾಗಲಿ. ಆ ಶಕ್ತಿಯನ್ನು ಭಗವಾನ್ ಬಾಹುಬಲಿ ಸ್ವಾಮಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಈ ವೇಳೆ ಕೈ ಮುಗಿದು ಗುರುವಂದನೆ ಸಲ್ಲಿಸಿದ ದೇವೇಗೌಡರು, ಜಿನೈಕ್ಯರಾದ ಕರ್ಮಯೋಗಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಕೊಡುಗೆ, ಬಾಂಧವ್ಯವನ್ನು ಸ್ಮರಿಸಿದರು.
ಜ್ವರ, ಮೂತ್ರ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಗೌಡರು, ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.










