ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಹೋಬಳಿಯ ಹಸುಗವಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಬನಶಂಕರಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಭವ್ಯ ದಸರಾ ಮಹೋತ್ಸವವನ್ನು ಧಾರ್ಮಿಕ ವೈಭವದಿಂದ ಆಚರಿಸಲಾಯಿತು.
ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ವಿಶೇಷ ಅಲಂಕಾರಗಳನ್ನು ಅಲಂಕರಿಸಿ ಭಕ್ತರಿಗೆ ದರ್ಶನ ಕಲ್ಪಿಸಲಾಯಿತು. ದಿನನಿತ್ಯ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ, ಹೋಮ, ಹವನ ಹಾಗೂ ಅರ್ಚನೆಗಳಲ್ಲಿ ಭಾಗವಹಿಸಿ ಧಾರ್ಮಿಕ ಚಟುವಟಿಕೆಗಳಿಗೆ ಸಾಕ್ಷಿಯಾದರು.
ಅಂತಿಮ ದಿನ ಭಕ್ತರ ಉಪಸ್ಥಿತಿಯಲ್ಲಿ ಹೋಮಹವನ ಹಾಗೂ ವಿಶೇಷ ಪೂಜೆ ನೆರವೇರಿಸಿ ಉತ್ಸವವನ್ನು ಸಾಂಪ್ರದಾಯಿಕವಾಗಿ ಸಂಪನ್ನಗೊಳಿಸಲಾಯಿತು. ಹಸುಗವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರ ಅತಿಹೆಚ್ಚಿನ ಸಂಖ್ಯೆಯ ಉಪಸ್ಥಿತಿಯಲ್ಲಿ ಉತ್ಸವಕ್ಕೆ ಭಕ್ತಿ ವೈಭವವನ್ನು ತುಂಬಿತು.










