ಬೆಳಗಾವಿ: ಲೋಕಾಪುರ-ಧಾರವಾಡ ನೂತನ ರೈಲ್ವೆ ಮಾರ್ಗಕ್ಕಾಗಿ 40 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, 2016ರಲ್ಲಿ ಸರ್ವೆ ಕಾರ್ಯ ನಡೆದರೂ ಅನುಷ್ಠಾನಕ್ಕೆ ಬಂದಿಲ್ಲ. ಈ ಯೋಜನೆ ಕೈಗೂಡಿದ್ದಲ್ಲಿ ಔದ್ಯೋಗಿಕ, ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಜನರ ಸಮಯ, ಹಣ ಉಳಿತಾಯವಾಗಲಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರದರ್ಶನದಿಂದ ಯೋಜನೆ ಸಾಕಾರಗೊಳ್ಳುವ ನಿರೀಕ್ಷೆ ಇದೆ.
ಲೋಕಾಪುರ-ಧಾರವಾಡ ರೈಲ್ವೆ ಮಾರ್ಗ ಮಾಜಿ ಸಂಸದ ದಿ. ಸುರೇಶ ಅಂಗಡಿ ಅವರ ಕನಸಾಗಿತ್ತು. ಈಗ ಲಕ್ಷಾಂತರ ಜನರಿಂದ ಪತ್ರ ಚಳವಳಿ ಪ್ರಾರಂಭವಾಗಿದೆ. ಒಂದು ರೈಲ್ವೆ ಮಾರ್ಗಕ್ಕಾಗಿ ಇನ್ನೆಷ್ಟು ದಿನ ಹೋರಾಡಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.2016-17 ರಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳು ನೂತನ ರೈಲ್ವೆ ಮಾರ್ಗಕ್ಕೆ 1167 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು.
ಲೋಕಾಪುರ- ರಾಮದುರ್ಗ-ಸವದತ್ತಿ – ಧಾರವಾಡ ನೂತನ ರೈಲ್ವೆ ಮಾರ್ಗಕ್ಕಾಗಿ ಸತತ 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಈವರೆಗೂ ಯಾವುದೇ ಸರಕಾರಗಳಿಂದ ಸಕಾರಾತ್ಮಕ ಸ್ಪಂದನೆ ಸಿಗದಿರುವುದು ಈ ಭಾಗದ ಜನರಿಗೆ ಭಾರೀ ನಿರಾಸೆ ಮೂಡಿಸಿದೆ.
2016-17 ರಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳು ಲೋಕಾಪುರ-ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ 1167 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು.
2016ರಲ್ಲಿ ಕೇಂದ್ರ ಸರಕಾರ ಸರ್ವೇಗಾಗಿ 14 ಲಕ್ಷ ರೂ.ಅನುದಾನ ಕೂಡ ಬಿಡುಗಡೆ ಮಾಡಿತ್ತು. ಮೂರು ಹಂತದಲ್ಲಿ ನಡೆದ ಸರ್ವೆ ಕಾರ್ಯದಲ್ಲಿ 97 ಕಿಮೀ, 109 ಕಿಮೀ ಹಾಗೂ 137 ಕಿಮೀ ಸರ್ವೇ ಮಾಡಿ 6 ವರ್ಷ ಗತಿಸಿದ್ದರೂ ಅನುಷ್ಠಾನದ ಕುರಿತು ಸಕಾರಾತ್ಮಕ ಬೆಳವಣಿಗೆ ಆಗದಿರುವುದು ವಿಪರ್ಯಾಸ.
ಸಾಕಷ್ಟು ಅನುಕೂಲ:
ಈ ರೈಲ್ವೆ ಸಂಪರ್ಕ ಕಲ್ಪಿಸಿದರೆ ಮಾರ್ಗ ಮಧ್ಯೆ ಬರುವ ನಗರ ಮತ್ತು ಪಟ್ಟಣಗಳು ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಧಾರವಾಡ ವಿವಿ, ಹೈಕೋರ್ಟ್ ಪೀಠ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿ ಬರಲು ಸಹಕಾರಿ. ಜನರಿಗೆ ಸಮಯ ಹಾಗೂ ಹಣವೂ ಉಳಿತಾಯವಾಗಲಿದೆ.
ಅದಲ್ಲದೇ ಗೊಡಚಿ ವೀರಭದ್ರೇಶ್ವರ, ಸುರೇಬಾನದ ಶಬರಿ ದೇವಸ್ಥಾನ ಮುಂತಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಅನುಕೂಲ.
ಸಾಕಾರಗೊಳ್ಳದ ಅಂಗಡಿ ಕನಸು:
ಲೋಕಾಪುರ-ಧಾರವಾಡ ರೈಲ್ವೆ ಮಾರ್ಗ ಮಾಜಿ ಸಂಸದ ದಿ. ಸುರೇಶ ಅಂಗಡಿ ಅವರ ಕನಸಾಗಿತ್ತು. ರೈಲ್ವೆ ಖಾತೆ ರಾಜ್ಯ ಸಚಿವರಾದ ಮೇಲೆ ಅವರು ರಾಮದುರ್ಗಕ್ಕೆ ಬಂದಾಗ ಈ ಮಾರ್ಗ ಅನುಷ್ಠಾನದ ಭರವಸೆ ನೀಡಿ ಪ್ರಯತ್ನ ಕೂಡ ನಡೆಸಿದ್ದರು. ಆದರೆ, ಅವರ ಕಾಲಾನಂತರ ಅದು ಕನಸಾಗಿಯೇ ಉಳಿದಿದೆ.
ಆಗದ ಮಾತೇನಲ್ಲ:
ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಸಂಸದರು, ಸಚಿವರು ಹಾಗೂ ಶಾಸಕರು ಕೂಡಿಕೊಂಡು ಕೇಂದ್ರದ ಮೇಲೆ ಒತ್ತಡ ತಂದರೆ ಹೊಸ ರೈಲ್ವೆ ಮಾರ್ಗ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬಹುದು. ಇದು ಆಗದ ಮಾತೇನಲ್ಲ, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂಬುದು ಜನರ ಹಕ್ಕೊತ್ತಾಯ.
ಲಕ್ಷಾಂತರ ಜನರಿಂದ ಪತ್ರ ಚಳವಳಿ:
ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದಲ್ಲಿ ರಾಮದುರ್ಗ ಹಾಗೂ ಸವದತ್ತಿಯಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ರಾಮದುರ್ಗ ರೈಲ್ವೆ ಕ್ರಿಯಾ ಸಮಿತಿ ರಚನೆಗೊಂಡು ಬೃಹತ್ ಹೋರಾಟಗಳೂ ನಡೆದಿವೆ. ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈಗ ಲಕ್ಷಾಂತರ ಜನರಿಂದ ಪತ್ರ ಚಳವಳಿ ಪ್ರಾರಂಭವಾಗಿದೆ. ಒಂದು ರೈಲ್ವೆ ಮಾರ್ಗಕ್ಕಾಗಿ ಇನ್ನೆಷ್ಟು ದಿನ ಹೋರಾಡಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಹೋರಾಟಗಾರರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಈಚೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿ ಮನವರಿಕೆ ಮಾಡಲಾಗಿದೆ. ಅಧಿಕಾರಿಗಳು ಕೂಡ ಮತ್ತೊಮ್ಮೆ ಸರ್ವೇ ಮಾಡಿಸಿ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದಾರೆ. ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ ಜಗದೀಶ ಶೆಟ್ಟರ್, ಬೆಳಗಾವಿ ಸಂಸದ
ರಾಮದುರ್ಗ ಹಾಗೂ ಸವದತ್ತಿಯಲ್ಲಿ ಪಕ್ಷಾತೀತ ಹೋರಾಟ ನಡೆಯುತ್ತಿವೆ. ರೈಲ್ವೆ ಸಚಿವರು, ಸಂಸದರು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಬೆಳಗಾವಿ ಅಧಿವೇಶನದಲ್ಲಿಯೇ ರಾಜ್ಯ ಸರಕಾರ ಯೋಜನೆಗೆ ಭೂಮಿ ಒದಗಿಸುವ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದಿದ್ದಾರೆ ಕುತುಬುದ್ದೀನ್ ಖಾಜಿ, ರಾಜ್ಯಾಧ್ಯಕ್ಷರು, ರೈಲ್ವೆ ಹೋರಾಟ ಸಮಿತಿ, ಬಾಗಲಕೋಟೆ.
The fight for a new Lokapura-Dharwad railway line has been going on for 40 years, and although a survey was conducted in 2016, it has not been implemented.










