ಹಾಸನ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇಂದು ಪ್ರತಿಯೊಬ್ಬರಿಗೆ ಹಲವು ಮಾಹಿತಿಗಳನ್ನು ಒದಗಿಸುತ್ತಿದ್ದು, ಪ್ರತಿಯೊಬ್ಬರು ತಂತ್ರಜ್ಞಾನ ಬಳಕೆ ಮಾಡುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಎಂ.ಜಿ. ರಸ್ತೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲ ಡಾ. ಮಂಜುನಾಥ ಎಸ್. ಹೇಳಿದರು.
ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದಲ್ಲಿ ಅಂತರ್ ಜಾಲದಿಂದ ಮಾಹಿತಿ ಸಂಗ್ರಹಣ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ತಂತ್ರಜ್ಞಾನದ ಬಳಕೆ ದಿನೆ ದಿನೇ ಹೆಚ್ಚಾಗುತ್ತಲೇ ಇದ್ದು, ಅದೇ ರೀತಿ ದೇಶದಲ್ಲೂ ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ತಮ್ಮ ಅಂಗೈಯಲ್ಲಿರುವ ಮೊಬೈಲ್ ಪೋನ್ ಮೂಲಕ, ಇಲ್ಲವೇ ಕಂಪ್ಯೂಟರ್ ಮೂಲಕ ಎಲ್ಲವನ್ನೂ ಇಂದು ತಿಳಿಯಬಹುದಾಗಿದೆ.
ದೇಶದ ಬಹುತೇಕ ಗ್ರಂಥಾಲಯಗಳು ಇಂದು ತಾಂತ್ರಿಕವಾಗಿ ಉನ್ನತೀಕರಣ ಹೊಂದಿದ್ದು, ಯಾವುದೇ ಪುಸ್ತಕವನ್ನು ನಾವು ಅಂತರ್ಜಲಾದಲ್ಲಿ ವೀಕ್ಷಿಸಿ ಅಧ್ಯಯನ ಮಾಡಬಹುದಾಗಿದೆ. ವಿಶ್ವ ಹಾಗೂ ದೇಶದ ಮಹಾನ್ ಸಂಶೋಧಕರು ಮಂಡಿಸುವ ಹಲವು ವಿಷಯಗಳ ಪ್ರತಿಯನ್ನು ಅಂತರ್ಜಾಲದಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಅಧ್ಯಾಪಕರ ಸಂಶೋಧನೆಗೆ ಹೆಚ್ಚು ಪೂರಕವಾಗಿ ಅಂಶಗಳು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಅಧ್ಯಯನದ ಜೊತೆಗೆ ಕಂಪ್ಯೂಟರ್ನ ಬಳಕೆ ಹಾಗೂ ತಂತ್ರಜ್ಞಾನದ ಸಮಗ್ರ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ವಿದ್ಯಾರ್ಥಿನಿಯರು ಹೆಚ್ಚು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವುದರಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಪುಸ್ತಕಗಳು ದೇವರ ಸಮಾನ, ಪುಸ್ತಕಗಳನ್ನು ಯಾರು ಪ್ರೀತಿಯಿಂದ ಅಪ್ಪಿಕೊಂಡು ಒದುತ್ತಾರೋ ಅವರು ತಮ್ಮ ಜೀವನದಲ್ಲಿ ಯಶಸ್ಸು ಕಾಣಬಹುದು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತಮ್ಮ ಬೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳಲು ಮೊಬೈಲ್ನ್ನು ಬಳಕೆ ಮಾಡಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಐ.ಕ್ಯೂ.ಎ.ಸಿ. ಸಂಚಾಲಕ ಮೋಹನ್ ಕುಮಾರ್ ಜಿ.ಆರ್. ಅಧ್ಯಾಪಕ ನಂದನ್ ಹಾಗೂ ಇತರರು ಹಾಜರಿದ್ದರು.










