ಹಾಸನ: ಭಾರತದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಅಸ್ಥಿ ವಿಸರ್ಜನೆ ಇಂದು ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ನೆರವೇರಿತು.
ಭೈರಪ್ಪ ಅವರ ಪುತ್ರರಾದ ಉದಯ್ಶಂಕರ್ ಹಾಗೂ ರವಿಶಂಕರ್ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿ, ನೀರು ತುಂಬಿಸಿರುವ ಸಂತೇಶಿವರ ಕೆರೆಯ ಮಧ್ಯ ಭಾಗಕ್ಕೆ ತೆಪ್ಪದಲ್ಲಿ ತೆರಳಿ ಅಸ್ಥಿ ವಿಸರ್ಜನೆ ನೆರವೇರಿಸಿದರು.
ಗ್ರಾಮದ ಸಂತೇಶಿವರ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಭೈರಪ್ಪ ಅವರೇ ಮುತುವರ್ಜಿವಹಿಸಿ ಅನುಷ್ಠಾನಗೊಳಿಸಲು ಕಾರಣವಾಗಿದ್ದರು ಎನ್ನುವುದು ಸ್ಮರಣಾರ್ಹ.
ಮಂತ್ರೋಚ್ಚಾರಣೆ ಮತ್ತು ಘೋಷಗಳೊಂದಿಗೆ ಅಸ್ಥಿ ಮೆರವಣಿಗೆ ನಡೆದಿದ್ದು, ನೂರಾರು ಮಂದಿ ಗ್ರಾಮಸ್ಥರು, ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು ಭಾವನಾತ್ಮಕವಾಗಿ ಸಾಕ್ಷಿಯಾದರು.
ಈ ವೇಳೆ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ತೆಪ್ಪದಲ್ಲಿ ತೆರಳಿ ಕುಟುಂಬದೊಂದಿಗೆ ಅಂತಿಮ ವಿಧಿಯಲ್ಲಿ ಪಾಲ್ಗೊಂಡರು.










