ಅರಕಲಗೂಡು : ತಾಲೂಕಿನ ದೊಡ್ಡಗಾವನಹಳ್ಳಿ-ಚಿಕ್ಕಗಾವನಹಳ್ಳಿ ಗ್ರಾಮ ಪರಿಮಿತಿಯಲ್ಲಿನ ರಾಜ್ಯ ಹೆದ್ದಾರಿ-8 ರಸ್ತೆ ಮಳೆಯಿಂದ ತುಂಬಾ ಹಾಳಾಗಿದ್ದ ಪರಿಣಾಮ ವಾಹನ ಸಂಚಾರಕ್ಕೆ ದುಸ್ವಪ್ನವಾಗಿತ್ತು.ಈ ರಸ್ತೆಯನ್ನು 12ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ಭಾನುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹೊಳೆನರಸೀಪುರ-ಅರಕಲಗೂಡು ನಡುವಿನ ರಸ್ತೆ ಮಳೆಯಿಂದ ಕೆಲವು ಕಡೆ ಸಂಚಾರಕ್ಕೆ ಮಾರಕವಾಗುವ ರೀತಿಯಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.ಇವುಗಳನ್ನು ದುರಸ್ತಿಗೊಳಿಸುವ ಜತೆಗೆ ಇಂದು ಭೂಮಿ ಪೂಜೆ ಮಾಡಿರುವ ಗ್ರಾಮಗಳ ಪರಿಮಿತಿಯ ೭೫೦ಮೀಟರ್ ರಸ್ತೆ ಹೊಸದಾಗಿಯೇ ಅಭಿವೃದ್ಧಿಗೊಳ್ಳಲಿದೆ.ಈ ಜಾಗದ ರಸ್ತೆ ಸ್ವಲ್ಪಮಟ್ಟಿಗೆ ತಗ್ಗುಪ್ರದೇಶದಿಂದ ಕೂಡಿರುವ ಪರಿಣಾಮ ಮಳೆ ನೀರು ನಿಂತ್ತು ಗುಂಡಿಬೀಳಲು ಕಾರಣವಾಗಿದೆ.ಸ್ವಲ್ಪಮಟ್ಟಿಗೆ ಎತ್ತರಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ನೆನಗುದಿಗೆ ಬಿದ್ದಿದ್ದ ತಾಲೂಕಿನ ಹಂಡ್ರಂಗಿ-ಕಾರಗಲ್ ನಡುವಿನ ರಸ್ತೆ ಕಾಮಗಾರಿಯನ್ನು ೧೦ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.ಇದರಿಂದ ಕೊಡಗು ಜಿಲ್ಲೆಗೆ ಸಂಚಾರ ಮಾಡುವ ವಾಹನ ಸವಾರರಿಗೆ ಅನುಕೂಲವಾಗಲಿದೆ.ಈ ಎರಡು ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.ಸಣ್ಣಪುಟ್ಟ ನ್ಯೂನ್ಯತೆ ಎದುರಾದರೇ ಸ್ಥಳೀಯ ಗ್ರಾಮಸ್ಥರು ಹಾಜರಿದ್ದು ಪರಿಹರಿಸಿಕೊಂಡು ಉತ್ತಮ ರಸ್ತೆ ನಿರ್ಮಿಸಿಕೊಳ್ಳುವತ್ತಾ ಮುಂದಾಗಬೇಕೆಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿಂದುರಾಮಸ್ವಾಮಿ, ಎಇ ಸಾಗರ್, ಮುಖಂಡರಾದ ಶ್ರೀನಿವಾಸ್, ನರಸೇಗೌಡ, ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು ಇತರರು ಹಾಜರಿದ್ದರು.










