ಹಾಸನ: ಸಾಣೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ

Sanenahalli Government Higher Primary School in-charge Headmistress Suhasini G. S. opined that real teachers are those who teach children as children, with the innocence of the school children.

ಹಾಸನ: ಶಾಲಾ ಮಕ್ಕಳ ಮುಗ್ದತೆಯರಿತು ಮಗುವಿನೊಟ್ಟಿಗೆ ಮಗುವಾಗಿ ವಿದ್ಯೆ ಕಲಿಸುವವರೇ ನಿಜವಾದ ಶಿಕ್ಷಕರು ಎಂದು ಸಾಣೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ್ಯೊಪಾಧ್ಯಯಿನಿ ಸುಹಾಸಿನಿ ಜಿ. ಎಸ್. ಅಭಿಪ್ರಾಯಪಟ್ಟರು.

ಹಾಸನ ತಾಲ್ಲೂಕಿನ ಸಾಣೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಮಾತನ್ನಾಡುತ್ತಾ ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಲಾಖೆಯ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಉತ್ತಮ ಸಂಸ್ಕಾರ ಬೆಳೆಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಾ ನಂ ಲೋಕೇಶ್ ಪ್ರಧಾನ ಭಾಷಣ ಮಾಡುತ್ತಾ ಗ್ರಾಮೀಣ ಪ್ರದೇಶದ ಮುಗ್ಧ ಜನರ ಮಕ್ಕಳಿಗೆ ಪ್ರೋತ್ಸಾಹದಾಯಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಸೇವಾ ನಿಷ್ಠೆ ತೋರಿಸಬೇಕು. ಪ್ರತಿ ಮಕ್ಕಳು ಒಂದಿಲ್ಲೊಂದು ಪ್ರತಿಭೆಯನ್ನು ಹೊಂದಿರುತ್ತದೆ. ಇದನ್ನು ಹೆಕ್ಕಿ ತೆಗೆದು ಪ್ರದರ್ಶನಕ್ಕೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿದ್ದೆ ಆದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ನಾಂದಿ ಹಾಡಿದಂತೆಯೇ ಸರಿ. ಇಂತಹ ಉತ್ತಮ ಕೆಲಸ ಸಾಣೇನಹಳ್ಳಿ ಶಾಲೆಯ ಶಿಕ್ಷಕರಿಂದ ಆಗುತ್ತಿದೆ ಎಂಬುದಕ್ಕೆ ಇಂದಿನ ದಿನದಂದು ವಿದ್ಯಾರ್ಥಿಗಳು ಪ್ರದರ್ಶಿಸುತ್ತಿರುವ ಚಟುವಟಿಕೆಗಳು ಸಾಕ್ಷೀಕರಿಸುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನ್ನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚೈತ್ರ ನಾಯಕರಹಳ್ಳಿ ಶಾಲೆಗಳ ಸಬಲೀಕರಣವಾಗಲು ಪೋಷಕರು ಹಾಗೂ ಸಮುದಾಯ ಕೈ ಜೋಡಿಸಬೇಕು. ಉತ್ತಮ ಶಿಕ್ಷಕರಿರುವ ಶಾಲೆ ಪ್ರಜ್ವಲಿಸುತ್ತದೆ. ಸೇವಾ ವೃತ್ತಿ ಎನಿಸಿಕೊಂಡಿರುವ ಶಿಕ್ಷಕ ವೃತ್ತಿಯನ್ನು ದೇವರ ಪೂಜೆಯಂತೆ ನಿಷ್ಠೆಯಿಂದ ಮಾಡುವ ಶಿಕ್ಷಕರು ಇಂದು ಸರ್ಕಾರಿ ಶಾಲೆಯಲ್ಲಿ ಕಾರ್ಯತತ್ಪರರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಚಾರ್ಯ ಕಾಮರ್ಸ್ ಕಾಲೇಜಿನ ಪ್ರಾoಶುಪಾಲ ಡಾ. ಆದರ್ಶ ಮಾತನ್ನಾಡುತ್ತಾ ಹಳ್ಳಿಯಲ್ಲಿ ಬೆಳೆದವರೇ ಡೆಲ್ಲಿಯವರೆಗೆ ಹೋಗುವುದರೊಂದಿಗೆ ಅಲ್ಲಿ ತನ್ನ ಚಾಪನ್ನು ಮೂಡಿಸುವ ಪ್ರತಿಭಾವಂತರಾಗುತ್ತಾರೆ.

ಜನಿಸಿದ ಯಾವ ಮಕ್ಕಳು ದಡ್ಡರಲ್ಲ, ಎಲ್ಲರನ್ನೂ ಬುದ್ದಿವಂತರನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗಿದೆ ಎಂಬುದು ಈ ಶಾಲೆಯ ಶಿಕ್ಷಕರಿಂದ ಗೋಚರವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಿಕಟಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನ್ನಾಡುತ್ತಾ ಶಿಕ್ಷಕರು ಮತ್ತು ಮಕ್ಕಳ ನಡುವಿನ ಆರೋಗ್ಯಕರ ಭಾಂದವ್ಯ ಬೆಳೆಯಲು ಪೋಷಕರು ಸಹಕಾರಿಯಾಗಿದ್ದಾರೆ. ಇದು ಸಂಬಲಗೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಕಾರ್ಯಕ್ರಮದ ಸ್ವಾಗತವನ್ನು ಮಾಡುವುದರೊಂದಿಗೆ ಎಲ್ಲಾ ಗಣ್ಯರನ್ನು ಶಿಕ್ಷಕರಾದ ಸುರೇಶ ಮತ್ತು ಕುಮಾರಸ್ವಾಮಿ ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಎಲ್ಲರ ಮನಗೆದ್ದಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ ವಿದ್ಯಾ ರಾಣಿ ವಹಿಸಿದ್ದರು. ಶಿಕ್ಷಕರಾದ ಕೆ ಎಸ್ ಸುರೇಶ, ಕುಮಾರಸ್ವಾಮಿ ಐ ಸಿ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಪುಟ್ಟರಾಜು, ಪ್ರೌಢ ಶಾಲಾ ಶಿಕ್ಷಕ ಮಂಜುನಾಥ್,ಶಿಕ್ಷಕರ ಸಂಘದ ಉಪಾಧ್ಯಕ್ಷ ಗುಡುಗನಹಳ್ಳಿ ಮಂಜುನಾಥ್, ಸಂಘದ ನಿರ್ದೇಶಕರು, ಪೋಷಕರು, ಸುತ್ತಮುತ್ತಲಿನ ಶಾಲೆಗಳ ಶಿಕ್ಷಕರು ಹಾಗೂ ನಾಗರೀಕರು ಉಪಸ್ಥಿತರಿದ್ದರು.

Sanenahalli Government Higher Primary School in-charge Headmistress Suhasini G. S. opined that real teachers are those who teach children as children, with the innocence of the school children.