ಸಕಲೇಶಪುರ: ಪಟ್ಟಣದಿಂದ ಆಲುವಳ್ಳಿ-ಕಡಗರವಳ್ಳಿ ಮಾರ್ಗಕ್ಕೆ ನೂತನ ಬಸ್ ಸಂಚಾರಕ್ಕೆ ಶಾಸಕ ಸಿಮೆಂಟ್ ಮಂಜು ಸೋಮವಾರ ಚಾಲನೆ ನೀಡಿದರು.
ನಗರದ ನೂತನ ಬಸ್ ನಿಲ್ದಾಣದಲ್ಲಿ ಬಸ್ ಗೆ ಪೂಜೆ ಸಲ್ಲಿಸಿ ಸಂಚಾರಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಹುದಿನಗಳಿಂದ ಬೇಡಿಕೆಯಿದ್ದ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಲಾಗುವುದು.
ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಾರಿಗೆ ಬಸ್ ಸೌಲಭ್ಯ ದೊರಕುವಂತಾಗಬೇಕು. ಹಲವು ವರ್ಷಗಳಿಂದ ಈ ಭಾಗಕ್ಕೆ ಸಾರ್ವಜನಿಕ ಸಾರಿಗೆ ಬೇಡಿಕೆ ಇತ್ತು. ವಿದ್ಯಾರ್ಥಿಗಳು, ರೈತರು, ಗ್ರಾಮಸ್ಥರು ಪಟ್ಟಣ, ನಗರಗಳಿಗೆ ತೆರಳಲು ಪರದಾಡುತ್ತಿದ್ದರು. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರ ಫಲವಾಗಿ ಇಂದು ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಲಾಗಿದೆ.
ಗ್ರಾಮಸ್ಥರು ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಮುಂದಿನ ದಿನಗಳಲ್ಲಿ ಸಕಲೇಶಪುರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಕೋವಿಡ್ ಸಂದರ್ಭದಲ್ಲಿ ತಾಲೂಕಿನಲ್ಲಿ ಕೆಲವು ಗ್ರಾಮೀಣ ಪ್ರದೇಶಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಬಸ್ ಸೌಲಭ್ಯಕ್ಕೆ ಬೇಡಿಕೆ ಬಂದ ಕಾರಣ 11 ಹೊಸ ಅಶ್ವಮೇಧ ಬಸ್ ಗಳು ಸಕಲೇಶಪುರ ಘಟಕಕ್ಕೆ ಬಂದಿದ್ದು ಆಗತ್ಯಕ್ಕೆ ಅನುಗುಣವಾಗಿ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು.
ಕ್ಷೇತ್ರದಿಂದ ವಿವಿಧೆಡೆ ಸಂಚರಿಸುವ ಹಳೆ ಬಸ್ಗಳನ್ನು ಬದಲಾವಣೆ ಮಾಡಲು ಹಾಗೂ ಹೊಸ ಬಸ್ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಸಾರ್ವಜನಿಕರು ಕರ್ನಾಟಕ ರಾಜ್ಯ ಸಾರಿಗೆ ಬಸ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.










