ಸಕಲೇಶಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಹಾರ ಮತದಾರರು ಮತ್ತೊಮ್ಮೆ ಎನ್ಡಿಎ ಪರ ನಿಂತಿರುವುದು ಜನಪರ ಆಡಳಿತದ ಗೆಲುವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್ ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಭರ್ಜರಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಮತ್ತು ಸಂಭ್ರಮಾಚರಣೆ ನಡೆಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಜಯೋತ್ಸವವನ್ನು ಆಚರಿಸಿದರು.
ಪ್ರಸಂಗದಲ್ಲಿ ಮಾತನಾಡಿದ ಅಶ್ವತ್, “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ, ಪಾರದರ್ಶಕ ಆಡಳಿತ, ಬಡವರ ಪರದ ಯೋಜನೆಗಳು ಬಿಹಾರ ಮತದಾರರನ್ನು ಮತ್ತೊಮ್ಮೆ ಎನ್ಡಿಎ ಪರ ನಿಲ್ಲಿಸುವಲ್ಲಿ ಪ್ರಮುಖ ಕಾರಣವಾಗಿದೆ. ಜನರು ಮತ್ತೆ ಮೋದಿ ಅವರ ಕೈ ಹಿಡಿದಿದ್ದಾರೆ.

ಕಾಂಗ್ರೆಸ್ ಪಕ್ಷ ವೋಟ್ ಚೋರಿ ಎಂದು ಚುನಾವಣಾ ಆಯೋಗಕ್ಕೂ ಬಿಜೆಪಿ ವಿರುದ್ಧವೂ ಅಪಪ್ರಚಾರ ನಡೆಸಿದರೂ ಮತದಾರರಿಂದ ಯಾವುದೇ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ. ಈ ಚುನಾವಣೆ ದೇಶದ ಜನತೆ ಮೋದಿ ಪರ ನಿಂತಿರುವುದನ್ನು ಸ್ಪಷ್ಟಪಡಿಸಿದೆ,” ಎಂದು ಹೇಳಿದರು.
ಅವರು ಮುಂದುವರಿಸಿ, “ಮುಂದಿನ ದಿನಗಳಲ್ಲಿ ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾರ್ಯಕ್ರಮದಲ್ಲಿ ಶಾಸಕರ ಧರ್ಮಪತ್ನಿ ಪ್ರತಿಭಾ ಮಂಜುನಾಥ್, ತಾಲೂಕು ಮುಖಂಡರಾದ ಯೋಗೇಶ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳು ಅಗ್ನಿ ಸೋಮಶೇಖರ್, ಮಧು ಬೊಮ್ಮನಕೆರೆ, ನಗರ ಬಿಜೆಪಿ ಅಧ್ಯಕ್ಷ ಲೋಕೇಶ್, ಹಿರಿಯ ಮುಖಂಡ ನಾರಾಯಣ ಆಳ್ವ, ಪುರಸಭೆ ಮಾಜಿ ಸದಸ್ಯ ಪ್ರದೀಪ್, ಪಕ್ಷದ ಮುಖಂಡರಾದ ಶರತ್ ವೀರಾಸ್, ಬಾಳೆಗದ್ದೆ ಲೋಕೇಶ್, ರೋಹಿತ್, ನವೀನ್ ಶೆಟ್ಟಿ, ಪ್ರಸನ್ನ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.










