ಹಾಸನ: ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕದನದ ಹಿನ್ನೆಲೆ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಂದೂರು ಮಠದಲ್ಲಿ ನಡೆದ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡಿದರು.
“ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನಾವು ಗಮನಿಸುತ್ತಿದ್ದೇವೆ. ಒಕ್ಕಲಿಗ ಸಮುದಾಯವು ರಾಜ್ಯವನ್ನು ಮುನ್ನಡೆಸಲು ಹಲವು ನಾಯಕರನ್ನು ಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಸಹ ನಮ್ಮ ಸಮುದಾಯದ ನಾಯಕ ಸಿಎಂ ಆಗಬೇಕು ಎಂಬ ಆತ್ಮೀಯ ನಿರೀಕ್ಷೆ ಸಮುದಾಯದಲ್ಲಿತ್ತು. ಆದರೆ ಈಗ ಅದು ಆಗುವಂತಹ ಪರಿಸ್ಥಿತಿ ಕಾಣುತ್ತಿಲ್ಲ,” ಎಂದರು.
“ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ಶ್ರಮಪಟ್ಟು ಹೋರಾಡಿದ ನಾಯಕ. ಅವರಲ್ಲಿ ಇರುವ ಸಾಮರ್ಥ್ಯ, ಸಂಘಟನಾ ಶಕ್ತಿ, ಪಕ್ಷ ನಿಷ್ಠೆ ಎಲ್ಲರಿಗೂ ಗೊತ್ತು. ಉಳಿದ ಅವಧಿಗೆ ಅವರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಹಾಗೂ ಸಾವಿರಾರು ಭಕ್ತರ ಮನದ ಮಾತು,” ಎಂದು ಹೇಳಿದರು.
ಪ್ರಸ್ತುತ ರಾಜಕೀಯ ತಿರುವು-ಮರುವುಗಳ ನಡುವೆ,“ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾದರೆ ಅಭಿವೃದ್ಧಿ ಕುಂಠಿತವಾಗುವುದು ನಿಶ್ಚಿತ. ರಾಜ್ಯದ ಹಿತವೂ ಮುಖ್ಯ. ಕಾಂಗ್ರೆಸ್ ಹೈಕಮಾಂಡ್ ಬೇಗನೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು,” ಎಂದು ನಿರ್ಮಲಾನಂದ ಶ್ರೀಗಳು ಸಲಹೆ ನೀಡಿದರು.
ಡಿಕೆಶಿ ‘ಏಕಾಂಗಿ’ ಆಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, “ಅವರು ಹುಟ್ಟು ಹೋರಾಟಗಾರರು. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ರಾಜಕೀಯ ಜ್ಞಾನ ಅವರ ಬಳಿ ಇದೆ,” ಎಂದಿದ್ದಾರೆ.










