ಮೈಸೂರಿನ ಡಾ. ನಾಗಶ್ರೀ ಪ್ರಕರಣದಲ್ಲಿ ಪ್ರೀತಿ ಮೋಸದಿಂದ 12 ವರ್ಷ ಕೋಮಾದಲ್ಲಿ ಬಾಳಿದ ಬಳಿಕ ಸಾವು. ವಿನೋದ್ ಕುಮಾರ್ ವಿರುದ್ಧ ಗಂಭೀರ ಆರೋಪಗಳು, ಮರುತನಿಖೆಗೆ ಆಗ್ರಹ.
ಮೈಸೂರು: ಪ್ರೀತಿ-ಪ್ರೇಮ ಎಂಬ ಭಾವನೆ ಜೀವನವನ್ನು ಸುಂದರಗೊಳಿಸಬಹುದು. ಆದರೆ ತಪ್ಪು ವ್ಯಕ್ತಿಯ ಮೇಲಿನ ಅಂಧ ನಂಬಿಕೆ ಬದುಕನ್ನೇ ನಾಶಮಾಡಬಹುದು ಎಂಬುದಕ್ಕೆ ಡಾ. ನಾಗಶ್ರೀ ಅವರ ಹೃದಯವಿದ್ರಾವಕ ಘಟನೆ ಸಾಕ್ಷಿಯಾಗಿದೆ.
ಎಂಬಿಬಿಎಸ್ ಪೂರ್ಣಗೊಳಿಸಿ ವೈದ್ಯ ವೃತ್ತಿಗೆ ಕಾಲಿಟ್ಟಿದ್ದ ನಾಗಶ್ರೀ, ತಮ್ಮಿಗಿಂತ ಕಿರಿಯನಾದ ಜ್ಯೂನಿಯರ್ ವೈದ್ಯ ವಿನೋದ್ ಕುಮಾರ್ ಜೊತೆ ಹತ್ತಿರವಾದರು ಎನ್ನಲಾಗುತ್ತಿದೆ. ಸ್ನೇಹವಾಗಿ ಆರಂಭವಾದ ಸಂಬಂಧ ಕ್ರಮೇಣ ಪ್ರೀತಿಗೆ ತಿರುಗಿ, ಇಬ್ಬರೂ ಮೈಸೂರಿನ ವಿವಿಧ ಕಡೆಗಳಲ್ಲಿ ಸಮಯ ಕಳೆಯುತ್ತಿದ್ದರು.
ಮದುವೆಯ ನಿರೀಕ್ಷೆಯಲ್ಲಿದ್ದ ನಾಗಶ್ರೀಗೆ, ವಯಸ್ಸಿನ ಅಂತರ ಮತ್ತು ಮನೆಯವರ ವಿರೋಧವನ್ನು ಕಾರಣವನ್ನಾಗಿ ಹೇಳಿ ವಿನೋದ್ ಹಿಂಜರಿದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ನಂತರ ಪರಿಸ್ಥಿತಿ ತೀವ್ರವಾಗಿ ತಿರುಗಿ, ಇಬ್ಬರೂ ಆತ್ಮಹತ್ಯೆ ಯೋಚನೆ ಮಾಡಿದ್ದರೆಂದು ಹೇಳಲಾಗುತ್ತಿದೆ. ಶ್ರೀರಂಗಪಟ್ಟಣದ ಲಾಡ್ಜ್ನಲ್ಲಿ ನಾಗಶ್ರೀಗೆ ನಿದ್ರಾಮಾತ್ರೆ ಹಾಗೂ ಓವರ್ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಆಕೆ ಅಚೇತನ ಸ್ಥಿತಿಗೆ ಜಾರಿದರು.
ವಿನೋದ್ ಆತ್ಮಹತ್ಯೆ ಯತ್ನ ಮಾಡಿದಂತೆ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದರೂ, ಕೇವಲ ಒಂದೇ ದಿನದಲ್ಲಿ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾನೆ. ಆದರೆ ನಾಗಶ್ರೀ ಕೋಮಾಗೆ ಜಾರಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು.
ಸುಮಾರು 12 ವರ್ಷಗಳ ಕಾಲ ಯಾವುದೇ ನೆನಪು, ಚಲನೆ ಇಲ್ಲದೆ ಹಾಸಿಗೆಯಲ್ಲೇ ಬಿದ್ದಿದ್ದ ನಾಗಶ್ರೀ, ಕೊನೆಗೆ ಮಾರ್ಚ್ 24ರಂದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ವಿನೋದ್ ಕುಮಾರ್ ವಿರುದ್ಧ ಇನ್ನೂ ಹಲವು ಗಂಭೀರ ಆರೋಪಗಳು ಹೊರಬಂದಿವೆ. ಈತ ಮೂವರು ಮಹಿಳೆಯರ ಬದುಕಿನಲ್ಲಿ ಇದೇ ರೀತಿಯ ಮೋಸ ಮಾಡಿದ್ದಾನೆ ಎನ್ನಲಾಗುತ್ತಿದೆ. ಚಾರ್ಟೆಡ್ ಅಕೌಂಟೆಂಟ್ ಗೌತಮಿ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಜೊತೆಗೆ, ಮದುವೆಯಾದ ಬಳಿಕ ಹೆಂಡತಿಗೂ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದ್ದು, ಆಕೆ ಕೇವಲ 15 ದಿನಗಳಲ್ಲಿ ಮನೆ ಬಿಟ್ಟು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ ಎನ್ನಲಾಗಿದೆ.
ಈ ಹಿನ್ನೆಲೆ ಪೀಡಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಕೀಲ ಪಾಂಡು ಪೂಜಾರಿ ಆಗ್ರಹಿಸುತ್ತಿದ್ದು, ಪ್ರಕರಣ ಮರುತನಿಖೆಗೆ ಕೂಗು ಕೇಳಿಬರುತ್ತಿದೆ. ಈ ಘಟನೆ ಸಮಾಜದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪ್ರೀತಿ ಎಂಬ ಹೆಸರಿನಲ್ಲಿ ನಡೆಯುವ ಮೋಸಗಳ ಬಗ್ಗೆ ಎಚ್ಚರಿಕೆ ನೀಡುತ್ತಿದೆ.










