ಚನ್ನರಾಯಪಟ್ಟಣ: ಹಣ-ಅಸ್ತಿ ಸಂಪಾದನೆಗಿಂತ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ನವೀಕರಣಗೊಂಡಿರುವ ನಾಗೇಶ್ ಆಸ್ಪತ್ರೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಆರೋಗ್ಯವೇ ಸರಿಯಿಲ್ಲದ ಮೇಲೆ ಕೂಡಿಟ್ಟ ಅಷ್ಟೂ ಹಣವು ವ್ಯರ್ಥ ಎಂದರು.
ಕಾರ್ಖಾನೆ, ಸಂಘ-ಸಂಸ್ಥೆಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಆಧುನಿಕ ಯಂತ್ರೋಪಕರಣಗಳು ಪಾದಾರ್ಪಣೆ ಮಾಡಿದ್ದರಿಂದ ಮನುಷ್ಯ ಶ್ರಮದ ಕೆಲಸಗಳಿಂದ ದೂರ ಉಳಿಯುತ್ತಿದ್ದು, ಪರಿಣಾಮ ಇನ್ನಿಲ್ಲದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮನೆ ಊಟಕ್ಕಿಂತ ಯುವ ಸಮುದಾಯವು ರಸ್ತೆ ಬದಿಯಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಉಪಯೋಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳು ತಲೆದೂರುತ್ತಿದ್ದು ಬದುಕು ನಿಂತ ನೀರಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯೋಗ ಹಾಗೂ ಧ್ಯಾನವನ್ನು ಪ್ರತಿದಿನದ ದೈನಂದಿನ ಚಟುವಟಿಕೆಯಾಗಿ ರೂಢಿಸಿಕೊಳ್ಳಬೇಕು. ಅಡುಗೆಯಲ್ಲಿ ತಾಜಾ ತರಕಾರಿ ಬಳಕೆ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಸೂಕ್ತ. ಇದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕೃಷಿ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುವ ರೈತ ವರ್ಗವು ತಮ್ಮ ಆರೋಗ್ಯದ ಬಗ್ಗೆ ಅಗತ್ಯ ಕಾಳಜಿ ವಹಿಸುವುದಿಲ್ಲ. ವರ್ಷದಲ್ಲಿ 2-3 ಬಾರಿ ಆಸ್ಪತ್ರೆಗೆ ಭೇಟಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಸಂಸ್ಥೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ನಾಗೇಶ್, ಕಾರ್ಯದರ್ಶಿ ಡಾ.ಭಾರತಿ ಹಾಗೂ ಇತರರು ಇದ್ದರು.










