ಚನ್ನರಾಯಪಟ್ಟಣ: ಆಟೋ ಹಾಗೂ ಇತರೆ ವಾಹನಗಳ ಸವಾರರು ವಾಹನ ಪರವಾನಗಿ, ವಿಮೆ ಹಾಗೂ ಅಗತ್ಯ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಕುವೆಂಪು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಟೋ ನಿಲ್ದಾಣದಲ್ಲಿ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿ, ಅಪಘಾತಗಳು ನಡೆದ ಸಂದರ್ಭದಲ್ಲಿ ವಾಹನ ಪರವಾನಗಿ ಹಾಗೂ ಅಗತ್ಯ ದಾಖಲಾತಿಗಳು ಇಲ್ಲದಿದ್ದರೆ ಕಾನೂನು ತೊಡಕು ಉಂಟಾಗಲಿದೆ ಎಂದರು.
ಯಾವುದೇ ವಾಹನಗಳಿರಲಿ ಅದರ ಚಾಲಕನು ಸಂಚಾರಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಹಾಗೂ ಸೂಕ್ತ. ಅತಿ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಅಪಾಯಕಾರಿ. ನಿಮ್ಮ ಕುಟುಂಬವು ನಿಮ್ಮನ್ನೇ ನಂಬಿಕೊಂಡಿದೆ. ನಿಮ್ಮನ್ನು ಅವಲಂಬಿಸಿಕೊಂಡಿದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.
ಅವಧಿ ಮುಗಿದು ಹೆಚ್ಚು ಹಾನಿಯಾಗಿರುವ ಹಾಗೂ ತಾಂತ್ರಿಕ ದೋಷಗಳು ಮತ್ತು ಸಮಸ್ಯೆಗಳನ್ನು ಹೊಂದಿರುವ ವಾಹನಗಳನ್ನು ದಯವಿಟ್ಟು ಚಾಲನೆ ಮಾಡಬೇಡಿ. ಇದರಿಂದ ನಿಮ್ಮ ಬದುಕು ಹಾಗೂ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ ಎಂದು ಸಲಹೆ ನೀಡಿದರು.
ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅದೇ ರೀತಿ ಎಲ್ಲಾ ಆಟೋ ಚಾಲಕರು ವಾಹನ ಪರವಾನಗಿ ಜತೆಗೆ ಕಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಿಕೊಂಡು ಜಾಗೃತಿಯಿಂದ ವಾಹನ ಚಾಲನೆ ಮಾಡಬೇಕು.
ದುಡಿಯುವ ಬರದಲ್ಲಿ ಆರೋಗ್ಯವನ್ನು ಕಡೆಗಣಿಸಬೇಡಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಪುರಸಭಾ ಅಧ್ಯಕ್ಷ ಕೋಟೆ ಮೋಹನ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳಾದ ಮಖಾನ್ ಬಾಬು, ಸಿ.ಪಿ.ಮಂಜುನಾಥ್, ಕೆರೆ ಬೀದಿ ರಂಗಣ್ಣ, ಗೋವಿಂದ, ತಗ್ಯಮ್ಮ ಬಡಾವಣೆ ಶಿವರಾಜ್, ಚಿಕ್ಕಣ್ಣ, ಲಕ್ಷ್ಮಣ್ ಕ್ಯಾಂಟೀನ್, ಸೇರಿದಂತೆ ಇತರರು ಹಾಜರಿದ್ದರು.
MLA C.N. Balakrishna said that drivers of autos and other vehicles must have a vehicle license, insurance, and necessary documentation.









