ಚನ್ನರಾಯಪಟ್ಟಣ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.
ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಕೃಷಿ ಜಮೀನು ಜಲಾವೃತಗೊಂಡಿವೆ. ಅಲ್ಲದೆ ತಗ್ಗು ಪ್ರದೇಶಗಳಲ್ಲಿ ಜೌಗು ಕಾಣಿಸಿಕೊಂಡಿದೆ.
ತಾಲ್ಲೂಕಿನ ಎಂ.ಕೆ.ಹೊಸೂರು, ಚಿಕ್ಕೇನಹಳ್ಳಿ, ಅಣತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಬತ್ತಿ ಬರಿದಾಗಿದ್ದ ಕೊಳವೆ ಬಾವಿಗಳಲ್ಲಿ ಕೇಸಿಂಗ್ ಪೈಪ್ ಮೇಲಿನಿಂದ ನೀರು ಉಕ್ಕಿ ಹರಿಯುತ್ತಿದ್ದು ರೈತರಲ್ಲಿ ಆಶ್ಚರ್ಯದ ಜೊತೆಗೆ ಸಂತಸ ಮೂಡಿಸಿದೆ. ಚಿಕ್ಕೇನಹಳ್ಳಿ ಗ್ರಾಮದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತಿದ್ದು ಭೋರ್ಗರೆದು ಹರಿಯುತ್ತಿದೆ.










